ತಿರುವನಂತಪುರ: ಕೇರಳದ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರ ತಿರುವನಂತಪುರ ನಿವಾಸದಲ್ಲಿ ಸತತ 24 ಗಂಟೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ಶೋಧ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ಶೋಧ ಕಾರ್ಯ ಪೂರ್ಣಗೊಂಡಿದ್ದು, ಬೆಂಗಳೂರು ಡ್ರಗ್ ಪ್ರಕರಣವೊಂದರ ಆರೋಪಿಯ ಕ್ರೆಡಿಟ್ ಕಾರ್ಡ್ ಒಂದನ್ನು ಬಿನೀಶ್ ಕೋಣೆ ಯಲ್ಲಿ ಇ.ಡಿ ಅಧಿಕಾರಿಗಳೇ ತಂದಿಟ್ಟಿ ದ್ದಾರೆ ಎಂದು ಬಿನೀಶ್ ಅವರ ಪತ್ನಿ ಆರೋಪಿಸಿದ್ದಾರೆ. ‘ಶೋಧನಾ ವರದಿ
ಯೊಂದಕ್ಕೆ ಸಹಿ ಹಾಕುವಂತೆ ನನಗೆ ಇ.ಡಿ ಅಧಿಕಾರಿಗಳು ಒತ್ತಡ ಹೇರಿದರು. ಇದರಲ್ಲಿ ‘ಬೆಂಗಳೂರಿನ ಡ್ರಗ್ ಪ್ರಕರಣವೊಂದರ ಆರೋಪಿ ಮೊಹಮ್ಮದ್ ಅನೂಪ್ ಎಂಬವವನ ಕ್ರೆಡಿಟ್ ಕಾರ್ಡ್ ಬಿನೀಶ್ ಕೊಠಡಿಯಲ್ಲಿ ಪತ್ತೆಯಾಗಿದೆ’ ಎಂದು ಉಲ್ಲೇಖಿಸಲಾಗಿತ್ತು. ಬಿನೀಶ್ ಅವರ ಕೊಠಡಿಯಿಂದ ಇ.ಡಿಗೆ ಏನೂ ದೊರೆತಿಲ್ಲ. ಈ ಕ್ರೆಡಿಟ್ ಕಾರ್ಡ್ ಅನ್ನು ಇ.ಡಿ ಅಧಿಕಾರಿಗಳೇ ತಂದಿಟ್ಟು, ನಂತರ ಕೊಠಡಿಯಲ್ಲಿ ದೊರಕಿದೆ ಎಂದು ಉಲ್ಲೇಖಿಸಿದ್ದಾರೆ ಎಂದು’ ಬಿನೀಶ್ ಪತ್ನಿ ರೆನಿಟಾ ಆರೋಪಿಸಿದರು.
‘ನಾನು ಈ ವರದಿಗೆ ಸಹಿ ಹಾಕಲು ನಿರಾಕರಿಸಿದೆ. ಈ ಸಂದರ್ಭದಲ್ಲಿ ಸಹಿ ಹಾಕಿದರಷ್ಟೇ ನಿಮ್ಮ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದ ಅಧಿಕಾರಿಗಳು ಸಹಿ ಹಾಕಲು ಒತ್ತಡ ಹಾಕಿದರು. ಆದರೆ ನಾನು ಸಹಿ ಹಾಕಿಲ್ಲ’ ಎಂದು ರೆನಿಟಾ ಹೇಳಿದರು.
ಇ.ಡಿ. ಅಧಿಕಾರಿಗಳನ್ನು ತಡೆದ ಪೊಲೀಸರು: ಬಿನೀಶ್ ಅವರ ಪತ್ನಿ, ಮಕ್ಕಳು ಹಾಗೂ ಅತ್ತೆಯನ್ನು ಇ.ಡಿ ಅಧಿಕಾರಿಗಳು ಅಕ್ರಮವಾಗಿ ಗೃಹಬಂಧನ ದಲ್ಲಿ ಇರಿಸಿದ್ದಾರೆ ಎಂದು ಸಂಬಂಧಿಕ ರೊಬ್ಬರು ದೂರು ನೀಡಿದ್ದರು. ಈ ದೂರು ಆಧರಿಸಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು, ಮನೆಯಿಂದ ತೆರಳುತ್ತಿದ್ದ ಇ.ಡಿ ಅಧಿಕಾರಿಗಳನ್ನು ತಡೆದರು. ಈ ಕುರಿತು ಹೇಳಿಕೆಯನ್ನು ದಾಖಲಿಸುವ ಕುರಿತು ಇ.ಡಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ, ಸ್ಥಳದಿಂದ ತೆರಳಲು ಪೊಲೀಸರು ಅವಕಾಶ ನೀಡಿದ್ದಾರೆ.
ಮೂರು ವರ್ಷದ ಮಗು ಸೇರಿದಂತೆ ಕುಟುಂಬದ ಸದಸ್ಯರನ್ನು ಗೃಹಬಂಧನದಲ್ಲಿ ಇರಿಸಿರುವುದರ ಕುರಿತು ಸಂಬಂಧಿಕರು ಕೇರಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ನೀಡಿದ್ದರು. ಆಯೋಗದ ಸದಸ್ಯರೂ ಬಿನೀಶ್ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಆಯೋಗವನ್ನು ಭೇಟಿಯಾಗಲು ಇ.ಡಿ ಅಧಿಕಾರಿಗಳು ರೆನಿಟಾ, ಅವರ ಮಗಳು ಹಾಗೂ ತಾಯಿಗೆ ಅವಕಾಶ ನೀಡಿದ್ದರು. 24 ಗಂಟೆ ಇ.ಡಿ ಅಧಿಕಾರಿಗಳು ಮನೆಯಲ್ಲೇ ಇದ್ದ ಕಾರಣ ಮಗುವಿನ ಆರೈಕೆಗೆ ಅಡ್ಡಿಯಾಗಿತ್ತು ಎಂದು ಕುಟುಂಬ ಸದಸ್ಯರು ಆರೋಪಿಸಿದರು. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಆಯೋಗವು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.