ನವದೆಹಲಿ: ದೆಹಲಿಯ ಹಲವು ಪ್ರದೇಶಗಳಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಪಕ್ಷಿಗಳಿಗೆ ‘ಹಕ್ಕಿ ಜ್ವರ’ ತಗುಲಿರುವುದು ಸೋಮವಾರ ದೃಢಪಟ್ಟಿದೆ.
ಸಂಜಯ್ ಸರೋವರದಲ್ಲಿ 10 ಬಾತುಕೋಳಿ ಮೃತಪಟ್ಟಿತ್ತು. ಮಯೂರ್ ವಿಹಾರದ ಮೂರನೇ ಹಂತದಲ್ಲಿ 50 ಕಾಗೆಗಳು ಸಾವಿಗೀಡಾಗಿತ್ತು. ಈ ಪಕ್ಷಿಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು ಮೂರುಬಾತುಕೋಳಿಯ ಮಾದರಿ, ನಾಲ್ಕು ಕಾಗೆಗಳ ಮಾದರಿ ಸೇರಿದಂತೆ ದ್ವಾರಕದಲ್ಲಿ ಮೃತಪಟ್ಟಿದ್ದ ಒಂದು ಕಾಗೆಯ ಮಾದರಿಯನ್ನು ಭೋಪಾಲ್ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
‘ಭೋಪಾಲ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ 8 ಮಾದರಿಗಳಲ್ಲೂ ‘ಹಕ್ಕಿ ಜ್ವರ’ ದೃಢಪಟ್ಟಿದೆ. ಕೆಲವು ಮಾದರಿಗಳನ್ನು ಜಲಂಧರ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳ ವರದಿ ಇನ್ನೂ ಬರಬೇಕಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ದೆಹಲಿ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಸಂಜಯ್ ಸರೋವರ, ಹೌಜ್ ಖಾಸ್ ಪಾರ್ಕ್, ದ್ವಾರಕದ ಸೆಕ್ಟರ್ 9 ಪಾರ್ಕ್, ಹಸ್ತಾಲ್ ಪಾರ್ಕ್ಗಳನ್ನು ಮುಚ್ಚಿದೆ.