ನವದೆಹಲಿ: ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಅಪ್ರಸ್ತುತ ವಿಷಯಗಳ ಮಂಡನೆಯನ್ನು ಅವರು ಮುಂದುವರಿಸುತ್ತಲೇ ಇರುತ್ತಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಲೋಕಸಭಾ ಸ್ಪೀಕರ್ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ದುಬೆ ಕೂಡ ಸಮಿತಿಯ ಸದಸ್ಯರಾಗಿದ್ದಾರೆ.
ಪೆಗಾಸಸ್ಗೆ ಸಂಬಂಧಿಸಿ ಕೇಂದ್ರ ಸರ್ಕಾರದ ಅಧಿಕಾರಿಗಳನ್ನೂ ಪ್ರಶ್ನಿಸಲು ಸಮಿತಿಯು ಮುಂದಾದ ಕೆಲವೇ ದಿನಗಳಲ್ಲಿ ದುಬೆ ಅವರು ಈ ಪತ್ರ ಬರೆದಿದ್ದಾರೆ.
ಸಮಿತಿಯ ಸಭೆಯು ಬುಧವಾರ ನಿಗದಿಯಾಗಿತ್ತು. ಆದರೆ ಸಮಿತಿಯಲ್ಲಿರುವ ಬಿಜೆಪಿಯ ಸದಸ್ಯರು ಸಹಿ ಹಾಕದ ಕಾರಣ ಸಭೆ ನಡೆಯಲಿಲ್ಲ.
ಸಮಿತಿಯ ಅಧ್ಯಕ್ಷರಾಗಿ ತರೂರ್ ಅವರ ಮುಂದುವರಿಕೆಯ ಬಗ್ಗೆ ಹೆಚ್ಚಿನ ಸದಸ್ಯರು ಒಲವು ಹೊಂದಿಲ್ಲ ಎಂದೂ ಪತ್ರದಲ್ಲಿ ದುಬೆ ಉಲ್ಲೇಖಿಸಿದ್ದಾರೆ.
ಸದನದ ಒಳಗೆ ಹಾಗೂ ಸಮಿತಿಯಲ್ಲಿ ತರೂರ್ ಅವರು ಪ್ರಶ್ನಾರ್ಹ ಮತ್ತು ಪ್ರಜಾಪ್ರಭುತ್ವದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.