ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಯು ತನ್ನ ಸಂಕುಚಿತ ಕೋಮು ಕಾರ್ಯಸೂಚಿಯೊಂದಿಗೆ ಮರಳಿದೆ ಎಂದು ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಗುರುವಾರ ಆರೋಪಿಸಿದ್ದಾರೆ.
‘ಚುನಾವಣೆಗೂ ಮುನ್ನ ಬಿಜೆಪಿ ಮತ್ತೆ ತನ್ನ ಸಂಕುಚಿತ ರಾಜಕೀಯ ಆರಂಭಿಸಿದೆ. ಆದರೆ, ಅವರ ಅಭಿವೃದ್ಧಿ ಯೋಜನೆಗಳು ಪೊಳ್ಳು ಎಂದು ಈಗಾಗಲೇ ಸಾಬೀತಾಗಿದೆ’ ಎಂದು ಎಂದು ಅವರು ಟ್ವೀಟ್ನಲ್ಲಿ ಟೀಕಿಸಿದ್ದಾರೆ.
‘ಪಕ್ಷವು ಈಗ ಧಾರ್ಮಿಕ ಭಾವನೆಗಳು, ಹಿಂದೂ–ಮುಸ್ಲಿಂ ವಿಭಜನೆ ಮೊದಲಾದ ವಿಚಾರಗಳಲ್ಲಿ ರಾಜಕೀಯ ಮಾಡಲು ಆರಂಭಿಸಿದೆ. ಆದರೆ, ಜನರು ಮತ್ತೊಮ್ಮೆ ಮೋಸ ಹೋಗುವುದಿಲ್ಲ. ’ ಎಂದು ಅವರು ಹೇಳಿದರು.
‘ರಾಜ್ಯದ ಜನರ ತಲಾ ಆದಾಯ ಕುಂಠಿತವಾಗಿರುವುದು ಮತ್ತು ಇನ್ನೂ ಬಡವರು ಹಾಗೂ ಹಿಂದುಳಿದವರಾಗಿ ಉಳಿದಿರುವುದನ್ನು ಇತ್ತೀಚಿನ ರಿಸರ್ವ್ ಬ್ಯಾಂಕಿನ ಅಂಕಿ ಅಂಶಗಳು ತೋರಿಸುತ್ತಿವೆ. ಇವು ಬಿಜೆಪಿಯ ಅಭಿವೃದ್ಧಿ ಯೋಜನೆಗಳು ಕೇವಲ ಬಿಸಿ ಗಾಳಿಯಂತೆ ಎಂಬುದನ್ನು ಸಾಬೀತುಪಡಿಸುತ್ತದೆ’ ಎಂದು ಹೇಳಿದರು.