ನವದೆಹಲಿ:‘ನನ್ನ ಅಪ್ಪ ಹೆಚ್ಚು ನರಳಲಿಲ್ಲ ಎಂಬುದೇ ಸಮಾಧಾನ. 17 ವರ್ಷದಿಂದ ಅವರೊಂದಿಗೆ ಇದ್ದ ನೆನಪುಗಳನ್ನು ನಾನು ಸದಾ ಜೀವಂತವಿರಿಸಿಕೊಳ್ಳುತ್ತೇನೆ. ಅವರು ನನ್ನನ್ನು ಮಾತ್ರವಲ್ಲ, ಬದಲಿಗೆ ಎಲ್ಲರನ್ನೂ ಉತ್ತೇಜಿಸುತ್ತಿದ್ದರು. ಅವರು ನನ್ನನ್ನು ಸದಾ ಸಲಹುತ್ತಿದ್ದರು. ಈಗ ಅವರಿಲ್ಲದಿರುವ ಬದುಕು ಭಯವಾಗುತ್ತಿದೆ’ ಎಂದು ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿದ್ದರ್ ಅವರ ಪುತ್ರಿ ಆಶ್ನಾ ಲಿದ್ದರ್ ಹೇಳಿದ್ದಾರೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾಗಿದ್ದ ಬ್ರಿಗೇಡಿಯರ್ ಲಖ್ವಿಂದರ್ ಸಿಂಗ್ ಲಿದ್ದರ್ ಅವರ ಅಂತ್ಯಸಂಸ್ಕಾರವನ್ನು ಶುಕ್ರವಾರ ಬೆಳಿಗ್ಗೆ ಇಲ್ಲಿನ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಸಕಲ ಸೇನಾ ಗೌರವದೊಂದಿಗೆ ನೆರವೇರಿಸಲಾಯಿತು.
ಲಿದ್ದರ್ ಅವರ ಪತ್ನಿ ಗೀತಿಕಾ ಲಿದ್ದರ್ಅಂತಿಮ ಸಂಸ್ಕಾರಕ್ಕೂ ಮುನ್ನ ಮಾತನಾಡಿ,‘ನನ್ನ ಪತಿ ಸ್ನೇಹಮಯಿ ವ್ಯಕ್ತಿ ಮತ್ತು ಅವರು ಸದಾ ಎಲ್ಲರಿಗೂ ಪ್ರೀತಿ ಹಂಚುತ್ತಿದ್ದರು. ಹೀಗಾಗಿಯೇ ನನಗಾಗಿರುವ ಈ ನಷ್ಟದ ವೇಳೆ ಸಾಕಷ್ಟು ಜನ ದುಃಖಿತರಾಗಿದ್ದಾರೆ. ಅವರನ್ನು ನಗುತ್ತಾ ಬೀಳ್ಕೊಡಬೇಕು’ ಎಂದುಹೇಳಿದ್ದಾರೆ.
‘ಅವರಿಲ್ಲದೆ ಕಳೆಯಬೇಕಿರುವ ಈ ಬದುಕು ದೀರ್ಘವಾದುದು. ದೇವರು ಇದನ್ನೇ ಬಯಸಿದ್ದಾದರೆ, ನಾವು ಆ ಬದುಕನ್ನೇ ಬದುಕುತ್ತೇವೆ. ಆದರೆ, ಅವರು ಈ ರೀತಿ ನಮ್ಮಲ್ಲಿಗೆ ವಾಪಸಾಗಬೇಕು ಎಂದು ನಾವು ಎಂದೂ ಬಯಸಿರಲಿಲ್ಲ. ಲಿದ್ದರ್ ಒಳ್ಳೆಯ ತಂದೆಯಾಗಿದ್ದರು. ನನ್ನ ಮಗಳಿಗೆ ಅವಳ ತಂದೆಯ ಅನುಪಸ್ಥಿತಿ ಬಹಳ ಕಾಡಲಿದೆ. ಇದು ನಮಗಾದ ದೊಡ್ಡ ನಷ್ಟ’ ಎಂದೂದುಃಖ ತೋಡಿಕೊಂಡಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಲಿದ್ದರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ವಾಯುಪಡೆಯ ಹಲವು ಅಧಿಕಾರಿಗಳು ಅಂತ್ಯಸಂಸ್ಕಾರದ ವೇಳೆ ಹಾಜರಿದ್ದರು.
ಇದನ್ನೂ ಓದಿ:ಸಿಡಿಎಸ್ ರಾವತ್ಗೆ ದುಃಖತಪ್ತ ವಿದಾಯ
ಲಿದ್ದರ್ ಅವರ ಪತ್ನಿ ಗೀತಿಕಾ ಲಿದ್ದರ್ ಮತ್ತು ಪುತ್ರಿ ಆಶ್ನಾ ಲಿದ್ದರ್ ಅವರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು. ಅಂತಿಮ ಸಂಸ್ಕಾರಕ್ಕೂ ಮುನ್ನ ಇಬ್ಬರೂ, ಲಿದ್ದರ್ ಅವರಿದ್ದ ಶವಪೆಟ್ಟಿಗೆಯನ್ನು ಚುಂಬಿಸಿ ಕಣ್ಣೀರಿಟ್ಟರು. ಲಿದ್ದರ್ ಅವರ ಸಮವಸ್ತ್ರ, ಚಿತ್ರ ಮತ್ತು ಪದಕಗಳನ್ನು ಗೀತಿಕಾ ಅವರಿಗೆ ಹಸ್ತಾಂತರಿಸಿದಾಗ ಅವರು ಕಣ್ಣೀರಿಟ್ಟರು. ಈ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.