ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಧನ ಬೆಲೆ ಏರಿಕೆ: ಕೇಂದ್ರದ ವಿರುದ್ಧ ಬಿಎಸ್‌ಪಿ ವರಿಷ್ಠೆ ಮಾಯಾವತಿ ವಾಗ್ದಾಳಿ

Last Updated 23 ಫೆಬ್ರುವರಿ 2021, 8:38 IST
ಅಕ್ಷರ ಗಾತ್ರ

ಲಖನೌ: ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಬೆಲೆ ಏರಿಕೆಗೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಬಿಎಸ್‌ಪಿ ವರಿಷ್ಠೆ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ. ಸಾರ್ವಜನಿಕರ ಕಲ್ಯಾಣಕ್ಕೆಂದು ಈ ರೀತಿ ತೆರಿಗೆ ವಿಧಿಸುವ ಮೂಲಕ ನಿಧಿ ಸಂಗ್ರಹಿಸುವುದು ಅನ್ಯಾಯ ಎಂದು ಅವರು ಟೀಕಿಸಿದ್ದಾರೆ.

ಕೇಂದ್ರದ ಧೋರಣೆ ಖಂಡಿಸಿ ಟ್ವೀಟ್ ಮಾಡಿರುವ ಅವರು, ‘ಕೋವಿಡ್–19 ಸಾಂಕ್ರಾಮಿಕ, ನಿರುದ್ಯೋಗ ಹಾಗೂ ಹಣದುಬ್ಬರದಿಂದ ಈಗಾಗಲೇ ಹೈರಾಣಾಗಿರುವ ಜನರಿಗೆ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿಯ ನಿರಂತರ ಮತ್ತು ಅನಗತ್ಯ ಬೆಲೆ ಏರಿಕೆ ಮೂಲಕ ಮತ್ತಷ್ಟು ತೊಂದರೆ ನೀಡುವುದು ತಪ್ಪು’ ಎಂದು ಹೇಳಿದ್ದಾರೆ.

‘ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಮೇಲಿನ ತೆರಿಗೆಯನ್ನು ನಿರಂತರವಾಗಿ ಮತ್ತು ನಿರಂಕುಶವಾಗಿ ಹೆಚ್ಚಿಸುವ ಮೂಲಕ ಸಾರ್ವಜನಿಕರ ಜೇಬಿನ ಮೇಲೆ ಈ ರೀತಿ ಹೊರೆ ಹೇರುವುದನ್ನು ತಕ್ಷಣವೇ ನಿಲ್ಲಿಸಬೇಕಿದೆ. ವಾಸ್ತವವಾಗಿ ಅದು ಕೋಟ್ಯಂತರ ಬಡವರು, ಕಷ್ಟಪಟ್ಟು ದುಡಿಯುವ ಜನರು ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರವು ಮಾಡುವ ದೊಡ್ಡ ಪ್ರಯೋಜನವಾಗಲಿದೆ’ ಎಂದು ಅವರು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದ್ದು, ಮಂಗಳವಾರವೂ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 25 ಪೈಸೆ ಹೆಚ್ಚಾಗಿದ್ದು, ₹90.83 ಆಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆಯಾಗಿ ₹81.32 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT