ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ಐದನೇ ಹಂತದ ಮತದಾನಕ್ಕೆ ಬುಧವಾರ ಪ್ರಚಾರ ಅಂತ್ಯಗೊಂಡಿದೆ. ಏಪ್ರಿಲ್ 17ರಂದು 45 ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿದೆ.
ಸಂಜೆ 6.30ಕ್ಕೆ ಪ್ರಚಾರ ಕೊನೆಗೊಂಡಿತು. ನಾಲ್ಕನೇ ಹಂತದಲ್ಲಿ ಕೂಚ್ ಬಿಹಾರ್ ಹತ್ಯೆ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಆಯೋಗವು 48 ರಿಂದ 72 ಗಂಟೆಗಳವರೆಗೆ ‘ಮೌನ ಅವಧಿ’ ಇರುತ್ತದೆ ಎಂದು ಪ್ರಕಟಿಸಿದೆ.
ಐದನೇ ಹಂತದಲ್ಲಿ 342 ಅಭ್ಯರ್ಥಿಗಳು ಕಣದಲ್ಲಿದ್ದು, 1.13 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.ಸಿಲಿಗುರಿ ಮೇಯರ್ ಮತ್ತು ಎಡಪಂಥೀಯ ನಾಯಕ ಅಶೋಕ್ ಭಟ್ಟಾಚಾರ್ಯ, ರಾಜ್ಯ ಸಚಿವ ಬ್ರಾತ್ಯ ಬಸು ಮತ್ತು ಬಿಜೆಪಿಯ ಸಮಿಕ್ ಭಟ್ಟಾಚಾರ್ಯ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
ಉತ್ತರ ಪರಗಣ ಜಿಲ್ಲೆಯ 16 ಕ್ಷೇತ್ರಗಳು, ಪೂರ್ವ ವರ್ಧಮಾನ್ ಮತ್ತು ನಾದಿಯಾ ವಲಯದ ಎಂಟು ಕ್ಷೇತ್ರ, ಜಲಪೈಗುರಿಯ ಏಳು, ಡಾರ್ಜಿಲಿಂಗ್ ಮತ್ತು ಕಾಲಿಪಾಂಗ್ ಜಿಲ್ಲೆಯ ತಲಾ ಒಂದು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಕೂಚ್ಬಿಹಾರ್ ಘಟನೆಯಿಂದಾಗಿ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರೀಯ ಭದ್ರತಾ ಪಡೆಗಳ 853 ತುಕಡಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.