ಸುರಿ (ಪಶ್ಚಿಮ ಬಂಗಾಳ): ‘ಮನೆಯಿಂದ ಹೊರಬರುವ ಸಂದರ್ಭದಲ್ಲಿ ಬಿದಿರಿನ ಕೋಲನ್ನು ಹಿಡಿದುಕೊಳ್ಳಿ. ಅಗತ್ಯಬಿದ್ದರೆ ಅದರಿಂದ ಪ್ರತಿದಾಳಿ ನಡೆಸಿ’ ಎಂದು ಬಿಜೆಪಿ ಕಾರ್ಯಕರ್ತರಿಗೆ ಪಶ್ಚಿಮ ಬಂಗಾಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಬುಧವಾರ ಕರೆ ನೀಡಿದ್ದಾರೆ.
ಬೀರ್ಭೂಮ ಜಿಲ್ಲೆಯಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ರ್ಯಾಲಿಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ ದಿಲೀಪ್, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ, ಹಲವು ಟಿಎಂಸಿ ನಾಯಕರು ಜೈಲು ಸೇರಲಿದ್ದಾರೆ’ ಎಂದರು.
‘ರ್ಯಾಲಿಗೆ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಪೆಟ್ಟು ತಿನ್ನಲು ಬಿಜೆಪಿ ಕಾರ್ಯಕರ್ತರು ಹುಟ್ಟಿಲ್ಲ. ಮನೆಯಿಂದ ರಸ್ತೆಗಿಳಿಯುವಾಗ ಬರಿಗೈಯಲ್ಲಿ ನೀವು ಬರಬೇಡಿ. ಬಿದಿರಿನ ಕೋಲು ಹಿಡಿದುಕೊಳ್ಳಿ, ಅಗತ್ಯಬಿದ್ದರೆ ಪ್ರತಿದಾಳಿ ನಡೆಸಿ’ ಎಂದು ಬಿಜೆಪಿ ಕಾರ್ಯಕರ್ತರಿಗೆ ತಿಳಿಸಿದರು.
‘ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತೃಣಮೂಲ ಕಾಂಗ್ರೆಸ್ ನಾಯಕರ ಅಪೇಕ್ಷೆಯಂತೆ ಪೊಲೀಸರು ಹಾಗೂ ಆಡಳಿತವು ಕಾರ್ಯನಿರ್ವಹಿಸುತ್ತಿದೆ’ ಎಂದು ಘೋಷ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.