ನವದೆಹಲಿ(ಪಿಟಿಐ): ದೇಶದಲ್ಲಿನ ಗಂಭೀರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ವಾರಗಳವರೆಗೆ ಕೋವಿಡ್ -19 ಪರೀಕ್ಷೆ ಹೆಚ್ಚಿಸಲು ಮತ್ತು ಪ್ರಯೋಗಾಲಯ ಹಾಗೂ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಮಂಗಳವಾರ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ನಡೆಸಿದ ಪರಿಶೀಲನಾ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶಗಳ ಉನ್ನತ ಅಧಿಕಾರಿಗಳಿಗೆ ಈ ಸೂಚನೆ ನೀಡಲಾಯಿತು.
ಕೋವಿಡ್ಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸಿದ ನಂತರ, ಕೇಂದ್ರ ಗೃಹ ಕಾರ್ಯದರ್ಶಿಯವರು, ಕೇಂದ್ರ ಪ್ರಾಂತ್ಯಗಳಲ್ಲಿನ ಗಂಭೀರ ಪರಿಸ್ಥಿತಿಯ ವಿರುದ್ಧ ನಿರಂತರ ಜಾಗರೂಕತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವೈದ್ಯಕೀಯ ನಿರ್ವಹಣೆಯ ತುರ್ತು ಪರಿಶೀಲನೆ ನಡೆಸುವಂತೆ ಶಿಫಾರಸು ಮಾಡಿದ ಕೇಂದ್ರದ ಅಧಿಕಾರಿಗಳು, ಕೋವಿಡ್ ಪರಿಕ್ಷೆಗೆ ರ್ಯಾಪಿಡ್ ಟೆಸ್ಟ್, ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸಲಹೆ ನೀಡಿದರು.
ದೊಡ್ಡ ಸಂಖ್ಯೆಯಲ್ಲಿ ಜನಸಂದಣಿ ಸೇರುವುದನ್ನು ನಿಷೇಧಿಸಬೇಕು, ಚಳವಳಿಗಳನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಬೇಕು ಹಾಗೂ ಮಾರುಕಟ್ಟೆಗಳಿಗೆ ನಿಗದಿತ ಸಮಯ ನಿಗದಿಪಡಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದ್ದಾರೆ.