ನವದೆಹಲಿ: ರಾಜ್ಯಸಭೆಯ 12 ಸಂಸದರನ್ನು ಸಂಸತ್ ಅಧಿವೇಶನದಿಂದ ಅಮಾನತುಗೊಳಿಸಿದ ನಂತರ ಉದ್ಭವಿಸಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಸಂಬಂಧ ಚರ್ಚಿಸಲು ಸೋಮವಾರ (ಡಿ.20) ಸಭೆಯನ್ನು ಆಯೋಜಿಸಿರುವ ಸರ್ಕಾರ, ಐದು ಪಕ್ಷಗಳ ಸಭಾನಾಯಕರನ್ನು ಸಭೆಗೆ ಆಹ್ವಾನಿಸಿದೆ. ಸಂಸತ್ ಭವನದಲ್ಲಿ ಬೆಳಿಗ್ಗೆ 10ಕ್ಕೆ ಸಭೆ ನಿಗದಿಯಾಗಿದೆ.
ಆದರೆ, ಸರ್ಕಾರದ ಈ ನಡೆಯ ಹಿಂದಿನ ಉದ್ದೇಶದ ಬಗ್ಗೆಯೇ ಸಂಶಯ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳ ನಾಯಕರು, ಸಭೆಯಿಂದ ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ಈ ಸಂಬಂಧ ಕಾಂಗ್ರೆಸ್, ಟಿಎಂಸಿ, ಸಿಪಿಎಂ, ಶಿವಸೇನಾ ಹಾಗೂ ಸಿಪಿಐ ಪಕ್ಷಗಳ ಸಭಾನಾಯಕರಿಗೆ ಪತ್ರ ಬರೆದಿದ್ದಾರೆ. ಈ ಐದು ಪಕ್ಷಗಳಿಗೆ ಸೇರಿದ ಸಂಸದರನ್ನು ಪ್ರಸಕ್ತ ಅಧಿವೇಶನದಿಂದ ಅಮಾನತು ಮಾಡಲಾಗಿದೆ.