ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ಘಟನೆ ಬಳಿಕ ಕಾರ್ಯವಿಧಾನ ಬದಲು: ಸಿಆರ್‌ಪಿಎಫ್‌

Last Updated 14 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಶ್ರೀನಗರ: ಎರಡು ವರ್ಷಗಳ ಹಿಂದೆ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ನಂತರ ಅರೆಸೇನಾಪಡೆಯ ಕಾರ್ಯಾಚರಣೆ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿರುವುದರಿಂದ, ಕಣಿವೆಯಲ್ಲಿ ಅಂಥ ಘಟನೆ ಈವರೆಗೆ ಮರುಕಳಿಸಿಲ್ಲ ಎಂದು ಸಿಆರ್‌ಪಿಎಫ್‌ ಹೇಳಿದೆ.

2019ರ ಫೆ.14ರಂದು ಪುಲ್ವಾಮಾದಲ್ಲಿ ಜೈಶ್‌ ಎ–ಮಹಮ್ಮದ್‌ ಸಂಘಟನೆಯ ಅದಿಲ್‌ ದಾರ್‌ ಎಂಬ ಆತ್ಮಾಹುತಿ ದಾಳಿಕೋರ, ಸ್ಫೋಟಕಗಳಿಂದ ತುಂಬಿದ್ದ ತನ್ನ ಕಾರನ್ನು ಸಿಆರ್‌ಪಿಎಫ್‌ ಜವಾನರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಡಿಕ್ಕಿಹೊಡೆಸಿ ಸ್ಫೋಟಿಸಿದ್ದ. ಕೃತ್ಯದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾಗಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಆರಂಭವಾದಾಗಿನಿಂದ ಈವರೆಗೆ ನಡೆದ ಅತ್ಯಂತ ಮಾರಕ ದಾಳಿ ಇದಾಗಿತ್ತು.

‘ಆ ಘಟನೆಯ ನಂತರ ಸಿಆರ್‌ಪಿಎಫ್‌ನ ಕಾರ್ಯಾಚರಣೆ ಮತ್ತು ತರಬೇತಿ ವಿಧಾನ, ಬಳಸುವ ಸಾಧನಗಳು ಹಾಗೂ ಸಂಚಾರ ಮುಂತಾದ ಎಲ್ಲಾ ವಿಚಾರಗಳಲ್ಲೂ ಅನೇಕ ಸುಧಾರಣೆಗಳನ್ನು ಮಾಡಲಾಗಿದೆ. ಪೊಲೀಸ್‌, ಸೇನೆ ಹಾಗೂ ಸಿಆರ್‌ಪಿಎಫ್‌ ಮಧ್ಯೆ ಉತ್ತಮ ಸಮನ್ವಯವನ್ನು ಸಾಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಕಾರ್ಯಾಚರಣೆ ವಿಧಾನದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಭಯೋತ್ಪಾದಕರು ಎಂಥ ಸವಾಲನ್ನು ಒಡ್ಡಿದರೂ ಅವರಿಗೆ ಅಷ್ಟೇ ಬಲವಾದ ಪ್ರತ್ಯುತ್ತರ ನೀಡಲು ಸಾಧ್ಯವಾಗುವ ರೀತಿಯಲ್ಲಿ ತರಬೇತಿಯ ವ್ಯವಸ್ಥೆ ರೂಪಿಸಲಾಗಿದೆ. ಹೆದ್ದಾರಿಗಳಲ್ಲಿ ಸೇನಾ ವಾಹನಗಳ ಸುರಕ್ಷಿತ ಸಂಚಾರವನ್ನುಖಚಿತಪಡಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಸೈನಿಕರ ಸಂಚಾರವನ್ನು ಹೆಚ್ಚಾಗಿ ವಾಯು ಮಾರ್ಗದಲ್ಲೇ ನಡೆಸಲಾಗುತ್ತಿದೆ’ ಎಂದು ಕೇಂದ್ರದ ಮೀಸಲು ಪೊಲೀಸ್‌ ಪಡೆಯ ಐಜಿ‍ಪಿ ದೀಪಕ್‌ ರತನ್‌ ತಿಳಿಸಿದ್ದಾರೆ.

ಶ್ರೀನಗರ– ಜಮ್ಮು ರಾಷ್ಟ್ರೀಯ ಹೆದ್ದಾರಿಯ ಅನೇಕ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವೀಕ್ಷಣೆಗಾಗಿ ಡ್ರೋನ್‌ಗಳನ್ನೂ ಬಳಸಲಾಗುತ್ತಿದೆ. ಸಾಮಾನ್ಯವಾಗಿ ಸೈನಿಕರನ್ನು ಗುಂಡು ನಿರೋಧಕ ವಾಹನಗಳಲ್ಲಿ ಕರೆದೊಯ್ಯಲಾಗುತ್ತಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT