ರಾಯಪುರ್: ಛತ್ತೀಸ್ಗಡದ ಕಾಂಗ್ರೆಸ್ ಸರ್ಕಾರವೂ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗೋ ಮೂತ್ರವನ್ನು ಖರೀದಿಸಲು ಮುಂದಾಗಿದೆ.
‘ಈಗಾಗಲೇ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ‘ಗೋದಾನ ನ್ಯಾಯ ಯೋಜನೆ’ ಅಂಗವಾಗಿ ಬರುವ ‘ಹರೇಲಿ’ ಹಬ್ಬದಿಂದ ಗೋಮೂತ್ರ ಖರೀದಿ ಪ್ರಕ್ರಿಯೆಯನ್ನು ಆರಂಭಗೊಳಿಸಲಾಗುವುದು’ ಎಂದು ಗೋದಾನ ನ್ಯಾಯ ಯೋಜನೆ ನಿರ್ದೇಶಕ ಅಯ್ಯಜ್ ತಂಬೋಳಿ ಹೇಳಿದ್ದಾರೆ.
ಪ್ರತಿ ಲೀಟರ್ ಗೋ ಮೂತ್ರಕ್ಕೆ ₹4 ದರ ನಿಗದಿಪಡಿಸಲಾಗಿದೆ.
‘ಜಿಲ್ಲಾ ಕೇಂದ್ರಗಳಲ್ಲಿರುವ ಗೋಠಾಣೆಗಳು (ಗೋಶಾಲೆ) ಗೋಮೂತ್ರ ಖರೀದಿಸಲಿವೆ. ಆಯಾ ಜಿಲ್ಲೆಯ ರೈತರು ಸಂಗ್ರಹಿಸಿ ಗೋಮೂತ್ರವನ್ನು ಈ ಗೋಠಾಣೆಗಳಿಗೆ ತಂದು ನೀಡಬೇಕು’ ಎಂದು ಅವರು ತಿಳಿಸಿದ್ದಾರೆ.
‘ಗೋದಾನ ನ್ಯಾಯ ಯೋಜನೆ 2020 ರಲ್ಲಿ ಆರಂಭಿಸಲಾಯಿತು. ಈಗಾಗಲೇ ಈ ಯೋಜನೆಯಲ್ಲಿ ಸಗಣಿಯನ್ನು ಪ್ರತಿ ಕೆಜಿಗೆ ₹2ರಂತೆ ನೀಡಿ ಖರೀದಿಸಲಾಗುತ್ತಿದೆ. ಇಲ್ಲಿವರೆಗೆ 150 ಕೋಟಿ ರೂಪಾಯಿಯ ಸಗಣಿ ಖರೀದಿಸಿ ಸಾವಯವ ಮಿಷನ್ಗೆ ನೀಡಲಾಗಿದೆ’ ಎಂದಿದ್ದಾರೆ.
‘ಈಗ ಗೋಮೂತ್ರ ಖರೀದಿಯಿಂದ ರೈತರಿಗೆ ಆರ್ಥಿಕವಾಗಿ ಅನುಕೂಲ ಆಗಲಿದ್ದು ಅಲ್ಲದೇ ರಾಜ್ಯದಲ್ಲಿ ಸಾವಯವ ಮಿಷನ್ ಯೋಜನೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು’ ಎಂದು ಅಯ್ಯಜ್ ತಿಳಿಸಿದ್ದಾರೆ.