ಕೋಲ್ಕತ್ತ: ಮೈದಾನದಲ್ಲಿ ಬಿದ್ದಿದ್ದ ಜೀವಂತ ಬಾಂಬ್ ಅನ್ನು ಚೆಂಡೆಂದು ಸ್ಪರ್ಶಿಸಿದ ಮಗು ಗಾಯಗೊಂಡ ಘಟನೆ ಪಶ್ಚಿಮ ಬಂಗಾಳದ ಮಾತಾಭಾಂಗ ಪ್ರದೇಶದಲ್ಲಿ ಭಾನುವಾರ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೂಚ್ಬೆಹರ್ ಜಿಲ್ಲೆಯ ಮಾತಾಭಾಂಗ ಉಪವಿಭಾಗದ ಕೇದರ್ಹತ್ ಪ್ರದೇಶದಲ್ಲಿನ ತೆರೆದ ಮೈದಾನದಲ್ಲಿ ಮಗು ಒಂಟಿಯಾಗಿ ಆಟವಾಡುವಾಡುತ್ತಿತ್ತು. ಅಲ್ಲೇ ಬಿದ್ದಿದ್ದ ಬಾಂಬ್ ಅನ್ನು ಚೆಂಡೆಂದು ಮಗು ಭಾವಿಸಿದೆ. ತಿಳಿಯದೇ ಅದನ್ನು ಮುಟ್ಟಿದಾಗ ಬಾಂಬ್ ಸ್ಫೋಟಿಸಿದ್ದು ಮಗುವಿಗೆ ಗಾಯವಾಗಿದೆ. ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಗುವಿನ ಪೋಷಕರು ಸದ್ದು ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ನೆರವಿನೊಂದಿಗೆ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಣ್ಣ ಗಾಯವಾಗಿದ್ದು ಚಿಕಿತ್ಸೆಯಿಂದ ಮಗು ಚೇತರಿಸಿಕೊಳ್ಳುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯು ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಗದ್ದಲಕ್ಕೆ ಕಾರಣವಾಯಿತು. ‘ಹೊಸ ವರ್ಷದ ದಿನದಂದು ಗಾಯಗೊಂಡ ಮಗುವಿನ ಕುಟುಂಬಕ್ಕೆ ಇದು ಟಿಎಂಸಿ ಸರ್ಕಾರದ ಉಡುಗೊರೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಸಾಮಿಕ್ ಭಟ್ಟಾಚಾರ್ಯ ವ್ಯಂಗ್ಯವಾಡಿದ್ದಾರೆ.
‘ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಬಾಂಬ್ಗಳು ರಸ್ತೆಯಲ್ಲಿ ಸಿಗುತ್ತಿವೆ. ಇದರಿಂದ ಸಾಮಾನ್ಯ ಜನರ ಜೀವಕ್ಕೆ ಅಪಾಯ ಉಂಟಾಗುತ್ತಿದೆ. ಈ ಹಿಂದೆ ಭಟ್ಪಾರಾ, ಟಿಟಾಘರ್ ಮತ್ತು ಇತರೆಡೆ ಇಂತಹ ಪ್ರಕರಣಗಳು ನಡೆದಿತ್ತು’ ಎಂದು ಭಟ್ಟಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಪ್ರತಿಕ್ರಿಯಿಸಿ, ‘ಟಿಎಂಸಿ ತನ್ನ ಸಂಸ್ಥಾಪನಾ ದಿನದಂದು ಬಾಂಬ್ ಸ್ಫೋಟವನ್ನು ಉಡುಗೊರೆಯಾಗಿ ನೀಡಿದೆ. ಇದು ರಾಜ್ಯದಾದ್ಯಂತ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ತೋರಿಸುತ್ತಿದೆ’ ಎಂದರು.