ಶಿಮ್ಲಾ: ಹಿಮಾಚಲ ಪ್ರದೇಶದ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಪಂಡಿತ್ ಸುಖ್ ರಾಮ್ ಅವರು ನಿಧನರಾಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸುಖ್ ರಾಮ್ ಅವರನ್ನು ಮೇ 7ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಖ್ ರಾಮ್ಗೆ 94 ವರ್ಷ ವಯಸ್ಸಾಗಿತ್ತು.
ನಿಧನದ ಬಗ್ಗೆ ಅವರ ಮೊಮ್ಮಗ ಆಶ್ರಯ್ ಶರ್ಮಾ ಅವರು ಮಂಗಳವಾರ ತಡರಾತ್ರಿ ಫೇಸ್ಬುಕ್ನಲ್ಲಿ ತಾತನೊಂದಿಗಿನ ಬಾಲ್ಯದ ಫೋಟೊವನ್ನು ಪ್ರಕಟಿಸುವ ಮೂಲಕ ನಿಧನದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುಖ್ ರಾಮ್ ಅವರು ಮೇ 4ರಂದು ಮನಾಲಿಯಲ್ಲಿ ಬ್ರೈನ್ ಸ್ಟ್ರೋಕ್ಗೆ ಒಳಗಾಗಿದ್ದರು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ಗೆ ಕರೆದೊಯ್ಯಲಾಗಿತ್ತು.
ಸುಖ್ ರಾಮ್ ಅವರು 1993ರಿಂದ 1996 ರವರೆಗೆ ಕೇಂದ್ರದ ರಾಜ್ಯ ಸಂವಹನ ಖಾತೆಯ ಸಚಿವರಾಗಿದ್ದರು. ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರು ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ್ತು ಮೂರು ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಸುಖ್ ರಾಮ್ ಅವರ ಮಗ ಅನಿಲ್ ಶರ್ಮಾ ಮಂಡಿ ಕ್ಷೇತ್ರದ ಬಿಜೆಪಿ ಶಾಸಕರಾಗಿ ಚುನಾಹಿತರಾಗಿದ್ದಾರೆ.
ಸುಖ್ ರಾಮ್, 1996ರಲ್ಲಿ ಸಂವಹನ ಸಚಿವರಾಗಿದ್ದಾಗ ಭ್ರಷ್ಟಾಚಾರ ವೆಸಗಿದ್ದ ಕಾರಣದಿಂದಾಗಿ 2011ರಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಸುಖ್ ರಾಮ್, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.