ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ‘ಇಂದು ಈ ಸದನ ಮತ್ತು ಸಂವಿಧಾನಕ್ಕೆ ಗೌರವ ಸಲ್ಲಿಸುವ ದಿನ. ಸ್ವಾತಂತ್ರ್ಯ ಹೋರಾಟಗಾರರ ಬಹು ವರ್ಷಗಳ ಶ್ರಮ ಮತ್ತು ತ್ಯಾಗದ ಫಲವಾಗಿದೆ ಸಂವಿಧಾನ. ಇದು ಮಹಾತ್ಮ ಗಾಂಧಿ ಅವರನ್ನು ಸ್ಮರಿಸಬೇಕಾದ ದಿನವೂ ಆಗಿದೆ’ ಎಂದು ಹೇಳಿದರು.
‘ನಮ್ಮ ಸಂವಿಧಾನವು ದೇಶದ ಶತಮಾನಗಳ ಸಂಸ್ಕೃತಿಯನ್ನು ಒಳಗೊಂಡಿದೆ. ಸಂವಿಧಾನಕ್ಕೆ ಧಕ್ಕೆ ತರುವಂಥ ವಿಚಾರಗಳನ್ನು ನಾವು ನಿರ್ಲಕ್ಷಿಸುವಂತಿಲ್ಲ. ಇದಕ್ಕಾಗಿಯೇ ನಾವು ಈ ದಿನವನ್ನು ಆಚರಿಸಬೇಕು. ನಮ್ಮ ನಿರ್ಧಾರಗಳು ಸರಿಯಾಗಿ ಇವೆಯೇ ಎಂಬುದನ್ನು ಅರಿಯುವುದಕ್ಕಾಗಿ ನಾವು ಈ ದಿನವನ್ನು ಆಚರಿಸಬೇಕು’ ಎಂದು ಮೋದಿ ಹೇಳಿದರು.
ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ಕೊಟ್ಟ ಸಂವಿಧಾನದ ದಿನವನ್ನು ಆಚರಿಸಲು ಸಿದ್ಧರಿಲ್ಲದಿರುವುದು ಕಳವಳಕಾರಿ ಸಂಗತಿ. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮಹತ್ವದ ಭಾಗಗಳು. ಪ್ರಜಾಸತ್ತಾತ್ಮಕ ಸ್ವರೂಪಕ್ಕೆ ಧಕ್ಕೆ ಬಂದಾಗ ಸಂವಿಧಾನಕ್ಕೂ ಧಕ್ಕೆಯಾಗುತ್ತದೆ ಎಂದೂ ಅವರು ಹೇಳಿದರು.
26/11ರ ಹುತಾತ್ಮರಿಗೆ ಗೌರವ ನಮನ: 26/11ರ ಮುಂಬೈ ದಾಳಿಯ ಹುತಾತ್ಮರಿಗೆ ಮೋದಿ ಗೌರವ ನಮನ ಸಲ್ಲಿಸಿದರು.
ಇದು ನಮ್ಮ ದೇಶಕ್ಕೆ ಶತ್ರುಗಳು ಪ್ರವೇಶಿಸಿ ಭಯೋತ್ಪಾದಕ ಕೃತ್ಯ ಎಸಗಿದ ದಿನ. ಅಂದು ನಮ್ಮ ವೀರ ಯೋಧರು ದೇಶದ ಜನರಿಗಾಗಿ ಪ್ರಾಣತ್ಯಾಗ ಮಾಡಿದರು. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು.