ನವದೆಹಲಿ: ‘ಪರಿಸರದ ಮೇಲಿನ ಪರಿಣಾಮಗಳ ವಿಶ್ಲೇಷಣೆ ಕರಡು ಅಧಿಸೂಚನೆ–2020’ಯನ್ನು 22 ಭಾಷೆಗಳಲ್ಲಿ ಪ್ರಕಟಿಸಬೇಕೆಂಬ ನ್ಯಾಯಾಲಯದ ಆದೇಶವನ್ನು ಕೇಂದ್ರ ಪರಿಸರ ಸಚಿವಾಲಯ ಉಲ್ಲಂಘಿಸಿದೆ ಎಂದು ಆರೋಪಿಸಿ, ಪರಿಸರ ಕಾರ್ಯಕರ್ತರೊಬ್ಬರು ದೆಹಲಿ ಹೈಕೋರ್ಟ್ನಲ್ಲಿ ‘ನ್ಯಾಯಾಂಗ ನಿಂದನೆ’ ಅರ್ಜಿ ಸಲ್ಲಿಸಿದ್ದಾರೆ.
ಪರಿಸರ ಕಾರ್ಯಕರ್ತ ವಿಕ್ರಂ ತೊಂಗಾಡ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಸಚ್ದೇ ಅವರು ಈ ಕುರಿತು ಇದೇ 17ರೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರದ ಪರಿಸರ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಲು ನಿರ್ದೇಶಿಸಿದರು.
ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳಲ್ಲಿಯು ಈ ಕರಡು ಅಧಿಸೂಚನೆಯನ್ನು ಹತ್ತು ದಿನಗಗಳೊಳಗೆ ಪ್ರಕಟಿಸಬೇಕೆಂದು ಜೂನ್ 30ರಂದು ದೆಹಲಿ ಹೈಕೋರ್ಟ್ ಆದೇಶ ನೀಡಿತ್ತು.