ಆಗ್ರಾ: ಸಮಾಜವಾದಿ ಪಕ್ಷದಿಂದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಮೂರೇ ನಿಮಿಷಗಳಲ್ಲಿ ಮನವೊಲಿಸುವಲ್ಲಿ ರೂಪಾಲಿ ದೀಕ್ಷಿತ್ ಯಶಸ್ವಿಯಾಗಿದ್ದಾರೆ.
ಈ ಕುರಿತು ರೂಪಾಲಿ ಅವರೇ ಹೇಳಿಕೊಂಡಿದ್ದಾರೆ. ತನ್ನ ತಂದೆ ಮತ್ತು ಠಾಕೂರ್ ಸಮುದಾಯವನ್ನು ಅವಮಾನಿಸಿದ ಬಿಜೆಪಿ ಅಭ್ಯರ್ಥಿ ಚೋಟೆಲಾಲ್ ಸಿಂಗ್ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ರೂಪಾಲಿ ಹೇಳಿದ್ದಾರೆ.
‘ನಾನು ಅಖೀಲೇಶ್ರನ್ನು ಭೇಟಿ ಆದೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ನಾನು ಕಣಕ್ಕಿಳಿಯಬೇಕಿದೆ. ನಾನು ಚುನಾವಣೆಯಲ್ಲಿ ಖಂಡಿತ ಗೆಲ್ಲುತ್ತೇನೆ ಎಂಬ ಭರವಸೆ ನೀಡಿದೆ. ಅಖಿಲೇಶ್ ಅವರು ನನಗೆ ಟಿಕೆಟ್ ನೀಡಿದರು’ ಎಂದು ರೂಪಾಲಿ ಹೇಳಿದ್ದಾರೆ.
ರೂಪಾಲಿಗೆ ಟಿಕೆಟ್ ನೀಡುವ ಸಲುವಾಗಿ, ಈ ಮೊದಲು ಟಿಕೆಟ್ ನೀಡಿದ್ದ ಅಭ್ಯರ್ಥಿಗೆ ಕೊಕ್ ನೀಡಲಾಗಿದೆ ಎನ್ನಲಾಗಿದೆ.
ರೂಪಾಲಿ ಅವರು ಕಾನೂನು ಪದವೀಧರರು. ಬ್ರಿಟನ್ನ ಎರಡು ವಿಶ್ವವಿದ್ಯಾಲಯಗಳಿಂದ ಎಂಬಿಎ ಮತ್ತು ಎಂಎ ಪದವಿ ಪಡೆದಿದ್ದಾರೆ. ಮೂರು ವರ್ಷಗಳ ಕಾಲ ದುಬೈನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಎಸ್ಪಿ ಸೇರುವ ಮೊದಲು ಅವರು ಬಿಜೆಪಿಯಲ್ಲಿ ಇದ್ದರು.