ನವದೆಹಲಿ: ದೇಶದ 11 ರಾಜ್ಯಗಳಲ್ಲಿ 58 ಚುನಾವಣಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತ ಎಣಿಕೆ ನಡೆದಿದೆ. ನವೆಂಬರ್ 3ರಂದು ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮಂಗಳವಾರ ಬೆಳಗ್ಗೆ ಆರಂಭವಾಗಿದ್ದು ಈಗಲೂ ಮುಂದುವರಿದಿದೆ.
ಉಪಚುನಾವಣೆ ಮತ ಎಣಿಕೆ: ಪ್ರಮುಖ ಅಂಶಗಳು
ಮಧ್ಯಪ್ರದೇಶ :
17 ಸೀಟುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಮೂವರು ಸಚಿವರು ಹಿನ್ನಡೆ ಅನುಭವಿಸಿದ್ದಾರೆ.
ಗ್ವಾಲಿಯರ್, ಗ್ವಾಲಿಯರ್ ಪೂರ್ವ,ದಬರಾ, ಬಮರೋಯಿ,ಅಶೋಕ್ ನಗರ್, ಮಂಧಾತಾ, ನೇಪಾನಗರ್, ಬದನಾವರ್ ,ಸುವಾಸರ ಮತ್ತು ಜೌರಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
355 ಅಭ್ಯರ್ಥಿಗಳು ಕಣದಲ್ಲಿದ್ದು ಈ ಪೈಕಿ 12 ಸಚಿವರು ಸ್ಪರ್ಧಿಸುತ್ತಿದ್ದಾರೆ. ಶೇಕಡಾ 70.27 ಮತದಾನ ಇಲ್ಲಿ ನಡೆದಿದೆ.
ಉತ್ತರ ಪ್ರದೇಶ
ಬಿಜೆಪಿ 5 ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ ಅದೇ ವೇಳೆ ಸಮಾಜವಾದಿ ಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿ ತಲಾ ಒಂದು ಸೀಟಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. 7 ಸೀಟುಗಳಿಗೆ ಇಲ್ಲಿ ಉಪಚುನಾವಣೆ ನಡೆದಿದೆ.
ನೌಗಾಂವ್ ಸದತ್, ತುಂಡ್ಲಾ, ಬಂಗಾರ್ಮೌ, ಬುಲಂದ್ಶಹರ್, ಡಿಯೊರಿಯಾ, ಘಟಂಪುರ್ ಮತ್ತು ಮಲ್ಹಾನಿ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದ್ದು 88 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಶೇ. 53 ಮತದಾನ ಇಲ್ಲಿ ನಡೆದಿತ್ತು. ಮಲ್ಹಾನಿ ಸಮಾಜವಾದಿ ಪಕ್ಷ ಪ್ರಾಬಲ್ಯವಿರುವ ಕ್ಷೇತ್ರವಾಗಿದ್ದು, ಇನ್ನುಳಿದ ಕ್ಷೇತ್ರಗಳು ಬಿಜೆಪಿ ಮೇಲುಗೈ ಇರುವ ಕ್ಷೇತ್ರಗಳಾಗಿವೆ.
ಕರ್ನಾಟಕ
ರಾಜರಾಜೇಶ್ವರಿ ನಗರ ಮತ್ತು ಸಿರಾದಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.
ರಾಜರಾಜೇಶ್ವರಿ ನಗರದಲ್ಲಿ57,936 ಮತಗಳ ಅಂತರದಿಂದ ಮುನಿರತ್ನ ಗೆಲುವು
ಕೊನೆಯ/25ನೇ ಸುತ್ತು
ಮುನಿರತ್ನ (ಬಿಜೆಪಿ)-1,25,734
ಕುಸುಮಾ (ಕಾಂಗ್ರೆಸ್)-67,798
ಕೃಷ್ಣಮೂರ್ತಿ (ಜೆಡಿಎಸ್)-10,251
ನೋಟಾ- 2,494
ಅದೇ ವೇಳೆ ಶಿರಾ ಕ್ಷೇತ್ರದ 22 ಸುತ್ತಿನ ಎಣಿಕೆ ಮುಕ್ತಾಯವಾಗಿದ್ದುಬಿಜೆಪಿಯ ರಾಜೇಶ್ಗೌಡಗೆ 12,418 ಮತಗಳ ಜಯ ಗಳಿಸಿದ್ದಾರೆ.
ಅಮ್ಮಾಜಮ್ಮ (ಜೆಡಿಎಸ್)-34724
ಟಿ.ಬಿ ಜಯಚಂದ್ರ (ಕಾಂಗ್ರೆಸ್)-60321
ರಾಜೇಶ್ಗೌಡ (ಬಿಜೆಪಿ)-72739
ಗೆಲುವಿನ ಅಂತರ-12,418
ಮಣಿಪುರ
ಬಿಜೆಪಿ ಅಭ್ಯರ್ಥಿ ಒಯಿನಮ್ ಲುಖೊಯಿ ಸಿಂಗ್ ಅವರು ಮಣಿಪುರದ ವಾಂಗೊಯಿ ಕ್ಷೇತ್ರದ ಉಪಚುನಾವಣೆಯಲ್ಲಿ ಜಯ ಗಳಿಸಿದ್ದಾರೆ.
ವಾಂಗೊಯಿ ಅವರು ತಮ್ಮ ಪ್ರತಿಸ್ಪರ್ಧಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಖುರೈಜಮ್ ಲೊಕೆನ್ ಸಿಂಗ್ ಅವರನ್ನು 257 ಮತಗಳ ಅಂತರದಿಂದ ಸೋಲಿಸಿದರು ಎಂದು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಇತರ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಮುಂದಿದ್ದಾರೆ.
ನಾಗಾಲ್ಯಾಂಡ್
ದಕ್ಷಿಣ ಅಂಗಾಮಿ ಮತ್ತು ಪುಂಗಾರೊ ಕಿಫೈರ್ ಚುನಾವಣಾ ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಪುಂಗ್ರೊ ಕಿಫೈರ್ ಚುನಾವಣಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಟಿ ಯಂಗ್ಸೀ ಸಾಂಗ್ತಂ ಬಿಜೆಪಿ ಅಭ್ಯರ್ಥಿ ಲಿರಿಮಾಂಗ್ ಸಾಂಗ್ತಂ ಅವರಿಂದ 1, 161 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಛತ್ತೀಸ್ಗಡ
ಛತ್ತೀಸ್ಗಡದ ಮರ್ವಾಹಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 3,664 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ, ಮತ ಎಣಿಕೆ ಆರಂಭದಲ್ಲಿ ಕಾಂಗ್ರೆಸ್ ಪಕ್ಷದ ಕೆಕೆ ಧ್ರುವ್ ಅವರು ಬಿಜೆಪಿ ಅಭ್ಯರ್ಥಿ ಕೆಕೆ ಗಂಭೀರ್ ಸಿಂಗ್ ಅವರನ್ನು 3,664 ಮತಗಳಿಂದ ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದರು.
ಒಡಿಶಾ
ಆಡಳಿತಾರೂಢ ಬಿಜೆಡಿ ಅಭ್ಯರ್ಥಿಗಳು ಬಾಲಸೋರ್ ಮತ್ತು ತಿರ್ತೋಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ಜಾರ್ಖಂಡ್
ದುಮಕಾ ಮತ್ತು ಬೆರಮೊ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ,ದುಮಕಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಲಾಯಿಸ್ ಮರಾಂಡಿ ಜಾರ್ಖಂಡ್ ಮುಕ್ತಿ ಮೋರ್ಚಾ ಅಭ್ಯರ್ಥಿ ಬಸಂತ್ ಸೋರೆನ್ ಅವರಿಂದ 7,938 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ತೆಲಂಗಾಣ
ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ 7ನೇ ಸುತ್ತಿನ ಮತ ಎಣಿಕೆ ಮುಗಿದಾಗ ಟಿಆರ್ಎಸ್ ಅಭ್ಯರ್ಥಿ ಸೊಲಿಪೆಟಾ ಸುಜಾತಾ ಅವರಿಂದ 2,485 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಹರ್ಯಾಣ
ಹರ್ಯಾಣದ ಬರೋಡಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಂದೂ ರಾಜ್ ನರ್ವಲ್ ಅವರು ಬಿಜೆಪಿ ಅಭ್ಯರ್ಥಿ ಯೋಗೇಶ್ವರ್ ದತ್ತಾ ಅವರಿಂದ ಮುನ್ನಡೆ ಗಳಿಸಿದ್ದಾರೆ. ಇಲ್ಲಿ 20 ಸುತ್ತಿನ ಮತ ಎಣಿಕೆ ನಡೆಯಲಿದೆ.
ಗುಜರಾತ್
ಗುಜರಾತ್ ವಿಧಾನಸಭಾ ಉಪಚುನಾವಣೆಗಳ ಮತ ಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಆಡಳಿತರೂಢ ಬಿಜೆಪಿಯು ಎಲ್ಲಾ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಲಿಂಬ್ಡಿ, ಅಬ್ಡಾಸ, ಕಪ್ರಾದ, ಡಂಗ್, ಕರ್ಜನ್ ಕ್ಷೇತ್ರದಲ್ಲಿ ಬಿಜೆಪಿಯು ಕಾಂಗ್ರೆಸ್ನಿಂದ ಗಮನಾರ್ಹ ಮತಗಳ ಅಂತರದಿಂದ ಮುಂದಿದೆ. ಮತ ಎಣಿಕೆ ಆರಂಭದಲ್ಲಿ ಮೊರ್ಬಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಜಯಂತಿಲಾಲ್ ಪಟೇಲ್ ಅವರನ್ನು ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಮಿರ್ಜಾ ಅವರು 1,000 ಮತಗಳ ಅಂತರದಿಂದ ಹಿಂದಿಕ್ಕಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳ ಮೂಲಕ ತಿಳಿದು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.