ನವದೆಹಲಿ: 'ವಿಭಜನೆಯ ಸಮಯದಲ್ಲಿ ದೇಶವು ದೊಡ್ಡ ಪ್ರಮಾದಕ್ಕೆ ಸಾಕ್ಷಿಯಾಯಿತು. ಅದನ್ನು ಮರೆಯಲು ಸಾಧ್ಯವಿಲ್ಲ. ಆದ್ದರಿಂದ ಈಗ ಮತ್ತೊಮ್ಮೆ ಅದು ಪುನರಾವರ್ತನೆ ಆಗುವುದಿಲ್ಲ,’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ನೋಯ್ಡಾದ ಕೃಷ್ಣಾನಂದ ಸಾಗರ ಎಂಬುವವರು ರಚಿಸಿರುವ ‘ವಿಭಜನ್ ಕಾಲೀನ್ ಭಾರತ್ ಸಾಕ್ಷಿ’ ಎಂಬ ಹಿಂದಿ ಪುಸ್ತಕವನ್ನು ಬಿಡುಗಡೆ ಮಾಡಿದ ಸಂಘದ ಮುಖ್ಯಸ್ಥ ಭಾಗವತ್, ‘ಇದು 2021ರ ಭಾರತ, 1947 ಅಲ್ಲ. ಒಮ್ಮೆ ದೇಶ ವಿಭಜನೆಯಾಯಿತು ಮತ್ತು ಈಗ ಅದು ಆಗುವುದಿಲ್ಲ’ ಎಂದು ಹೇಳಿದರು.
ವಿಭಜನೆ ಸಂದರ್ಭದಲ್ಲಿ ಒಡೆದು ಹೋಗಿದ್ದನ್ನು ಮತ್ತೆ ಒಟ್ಟುಗೂಡಿಸಬೇಕು ಎಂದು ಭಾಗವತ್ ಅವರು ಹೇಳಿದರು.
ಭಾರತದ ವಿಭಜನೆಗೆ ಸಂಚು ರೂಪಿಸಲಾಗಿತ್ತು. ಅದು ಇಂದಿಗೂ ಮುಂದುವರಿದಿದೆ. ದೇಶವಿಭಜನೆ ಶಾಂತಿಗಾಗಿ ನಡೆಯಿತು. ಆದರೆ ಅದರ ನಂತರವೂ ದೇಶದಲ್ಲಿ ಗಲಭೆಗಳು ನಡೆದಿವೆ ಎಂದು ಆರ್ಎಸ್ಎಸ್ ಮುಖ್ಯಸ್ಥರು ಪ್ರತಿಪಾದಿಸಿದರು.
‘ಭಾರತದ ಅಸ್ಮಿತೆ ಹಿಂದು. ಹಾಗಾಗಿ ಅದನ್ನು ಒಪ್ಪಿಕೊಂಡರೆ ಏನು ತೊಂದರೆ’ ಎಂದು ಅವರು ಪ್ರಶ್ನೆ ಮಾಡಿದರು.
'ಘರ್ ವಾಪ್ಸಿ' ಕುರಿತು ಮಾತನಾಡಿದ ಸಂಘದ ಪ್ರಮುಖರು, ಯಾರಾದರೂ ತಮ್ಮ ಪೂರ್ವಜರ ಮನೆಗೆ ಮರಳಲು ಬಯಸಿದರೆ ನಾವು ಅವರನ್ನು ಸ್ವಾಗತಿಸುತ್ತೇವೆ, ಆದರೆ ಅವರು ಬರಲು ಬಯಸದಿದ್ದರೆ ಪರವಾಗಿಲ್ಲ,‘ ಎಂದು ಹೇಳಿದರು.