ನವದೆಹಲಿ: ಭಾರತದಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ಪ್ರಕರಣಗಳ ಕೇಂದ್ರಬಿಂದುವೆಂದೇ ಪರಿಗಣಿಸಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 23,285 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 117 ಸೋಂಕಿತರು ಮೃತಪಟ್ಟಿದ್ದಾರೆಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಈ ವರೆಗೆ ಒಟ್ಟು 1,13,08,846 ಪ್ರಕರಣಗಳು ಬೆಳಕಿಗೆ ಬಂದಿದ್ದು, 1,58,306 ಮಂದಿ ಸಾವಿಗೀಡಾಗಿದ್ದಾರೆ.
ಕಳೆದ 24 ಗಂಟೆಗಳಲ್ಲಿ 15,157 ಸೋಂಕಿತರು ಚೇತರಿಸಿಕೊಂಡಿದ್ದು, ಈ ವರೆಗೆ ಗುಣಮುಖರಾದವರ ಸಂಖ್ಯೆ 1,09,53,303 ಕ್ಕೆ ತಲುಪಿದೆ. 1,97,237 ಸಕ್ರಿಯ ಪ್ರಕರಣಗಳಿವೆ.
ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಇರುವ ಹತ್ತು ಜಿಲ್ಲೆಗಳಲ್ಲಿ ಬೆಂಗಳೂರು ನಗರ ಮತ್ತು ಕೇರಳದ ಎರ್ನಾಕುಲಂ ಸೇರಿವೆ. ಉಳಿದ ಎಂಟು ಜಿಲ್ಲೆಗಳು ಮಹಾರಾಷ್ಟ್ರದ್ದಾಗಿವೆ. ಪುಣೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 18,474 ಸಕ್ರಿಯ ಪ್ರಕರಣಗಳು ಇವೆ. ನಾಗಪುರ (12,724), ಠಾಣೆ (10,460), ಮುಂಬೈ (9,973) ನಂತರದ ಸ್ಥಾನಗಳಲ್ಲಿವೆ. ಐದು ಮತ್ತು ಆರನೇ ಸ್ಥಾನಗಳಲ್ಲಿ ಕ್ರಮವಾಗಿ ಬೆಂಗಳೂರು ನಗರ (5,526) ಮತ್ತು ಎರ್ನಾಕುಲಂ (5,430) ಜಿಲ್ಲೆಗಳಿವೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ಇರುವ ಇತರ ಜಿಲ್ಲೆಗಳೆಂದರೆ ಅಮರಾವತಿ (5,259), ಜಲಗಾಂವ್ (5,029), ನಾಸಿಕ್ (4,525) ಮತ್ತು ಔರಂಗಾಬಾದ್ (4,354). ಮಹಾರಾಷ್ಟ್ರದಲ್ಲಿ ಈ ವರೆಗೆ ವರದಿಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 22,52,057. ಮೃತಪಟ್ಟವರ ಸಂಖ್ಯೆ 52,610 ಎಂದು ಮೂಲಗಳು ಹೇಳಿವೆ.
ಕೋವಿಡ್ ಸಾಂಕ್ರಾಮಿಕವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗುರುವಾರ ಹೇಳಿದ್ದಾರೆ.