ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಮೇಘಾಲಯದಲ್ಲಿ ಇನ್ಮುಂದೆ ಕೋವಿಡ್ ಪರೀಕ್ಷೆಗೂ ದರ ನಿಗದಿ

Last Updated 10 ಅಕ್ಟೋಬರ್ 2020, 16:08 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 73,272 ಹೊಸ ಪ್ರಕರಣಗಳು ದೃಢಪಟ್ಟಿದ್ದು, 926 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಈ ವರೆಗೂ ಒಟ್ಟು ಸೋಂಕಿತರ ಸಂಖ್ಯೆ 69,79,424ಕ್ಕೆ ಏರಿಕೆಯಾಗಿದ್ದು, ಆ ಪೈಕಿ 1,07,416 ಮಂದಿ ಮೃತಪಟ್ಟಿದ್ದಾರೆ. 58,27,705 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 8,83,185 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರದಲ್ಲಿ ಒಟ್ಟಾರೆ 24,862 ಜನ ಪೊಲೀಸರಿಗೆ ಸೋಂಕು

ಮಹಾರಾಷ್ಟ್ರದಲ್ಲಿ ಹೊಸದಾಗಿ 11,416 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 15,17,434ಕ್ಕೆ ಏರಿಕೆಯಾಗಿದೆ. ಈವರೆಗೂ 40,040 ಜನರು ಮೃತಪಟ್ಟಿದ್ದು, ಇಂದು 308 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 127 ಪೊಲೀಸರಿಗೆ ಸೋಂಕು ದೃಢಪಟ್ಟಿದ್ದು, ಈವರೆಗೆ 24,862 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 22,300 ಪೊಲೀಸರು ಗುಣಮುಖರಾಗಿದ್ದಾರೆ. 2,303 ಸಕ್ರಿಯ ಪ್ರಕರಣಗಳಿದ್ದು, 259 ಜನರು ಸಾವಿಗೀಡಾಗಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ 7.50 ಲಕ್ಷ ದಾಟಿದ ಸೋಂಕಿತರು

ಸೋಂಕು ಪೀಡಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5,653 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 7,50,517ಕ್ಕೆ ತಲುಪಿದೆ. ಈ ಪೈಕಿ 46,624 ಸಕ್ರಿಯ ಪ್ರಕರಣಗಳಿದ್ದು, 6,97,699 ಜನರು ಗುಣಮುಖರಾಗಿದ್ದಾರೆ. ಇಲ್ಲಿಯವರೆಗೂ 6,194 ಜನರು ಸಾವಿಗೀಡಾಗಿದ್ದಾರೆ.

ತಮಿಳುನಾಡಿನಲ್ಲಿ 5,242 ಹೊಸ ಕೋವಿಡ್ ಪ್ರಕರಣ

ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನಲ್ಲಿ 5,242 ಜನರಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, 5,222 ಜನರು ಗುಣಮುಖ ಮತ್ತು 67 ಜನರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6,51,370ಕ್ಕೆ ಏರಿಕೆಯಾಗಿದ್ದು, 44,150 ಸಕ್ರಿಯ ಪ್ರಕರಣಗಳಿವೆ. 5,97,033 ಜನರು ಗುಣಮುಖರಾಗಿದ್ದರೆ, ಒಟ್ಟಾರೆ 10,187 ಜನರು ಸಾವಿಗೀಡಾಗಿದ್ದಾರೆ.

ದೆಹಲಿ: ಮೂರು ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 48 ಜನರು ಸಾವಿಗೀಡಾಗಿದ್ದು, 2,866 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 3,06,559ಕ್ಕೆ ತಲುಪಿದೆ. ಈ ಪೈಕಿ 22,007 ಸಕ್ರಿಯ ಪ್ರಕರಣಗಳಿದ್ದರೆ, 2,78,812 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜಸ್ಥಾನದಲ್ಲಿ 2,123 ಹೊಸ ಪ್ರಕರಣ

ರಾಜಸ್ಥಾನದಲ್ಲಿ ಕಳೆದ 24 ಗಂಟೆಗಳಲ್ಲಿ 2,123 ಜನರಿಗೆ ಸೋಂಕು ದೃಢಪಟ್ಟಿದ್ದು, 15 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,56,908ಕ್ಕೆ ಏರಿಕೆಯಾಗಿದ್ದು, 1,636 ಜನರು ಸಾವಿಗೀಡಾಗಿದ್ದಾರೆ. 1,33,918 ಜನರು ಗುಣಮುಖರಾಗಿದ್ದರೆ, 21,354 ಸಕ್ರಿಯ ಪ್ರಕರಣಗಳಿರುವುದಾಗಿ ಸರ್ಕಾರ ತಿಳಿಸಿದೆ.

ಉಪಚುನಾವಣೆ ಅಭಿಯಾನಕ್ಕಾಗಿ ಮಾರ್ಗಸೂಚಿ ಬಿಡುಗಡೆ

ಎಂಟು ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 3ರ ಉಪಚುನಾವಣೆಯ ಅಂಗವಾಗಿ ಗುಜರಾಜ್ ಸರ್ಕಾರವು ಪ್ರಚಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮತದಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಹಾಜರಾಗಬಹುದಾದ ಜನರ ಸಂಖ್ಯೆಯನ್ನು ಸ್ಥಳದ ಸಾಮರ್ಥ್ಯದ 200 ಅಥವಾ ಶೇ 50ಕ್ಕೆ ಸೀಮಿತಗೊಳಿಸಿದೆ.

ಕೋವಿಡ್ ಪರೀಕ್ಷೆಗೆ ಹಣ

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪರೀಕ್ಷಾ ಕಿಟ್‌ಗಳ ಮೇಲಿನ ಸಬ್ಸಿಡಿಯನ್ನು ಹಿಂತೆಗೆದುಕೊಂಡಿರುವುದರಿಂದ ಅಕ್ಟೋಬರ್ 16 ರಿಂದ ಕೋವಿಡ್-19 ಪರೀಕ್ಷೆಗಳಿಗಾಗಿ ದರ ವಿಧಿಸಲಾಗುವುದು ಎಂದು ಮೇಘಾಲಯ ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸೊಂಗ್ ಬುಧವಾರ ಹೇಳಿದ್ದಾರೆ.

ಅಕ್ಟೋಬರ್‌ 9ರ ವರೆಗೂ ಒಟ್ಟು 8,57,98,698 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ 11,64,018 ಮಾದರಿಗಳನ್ನು ಶುಕ್ರವಾರ ಪರೀಕ್ಷಿಸಲಾಯಿತು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT