ನವದೆಹಲಿ: ಕಾಂಗ್ರೆಸ್ ಉನ್ನತ ನಾಯಕರು ಇದೇ 16 ರಂದು ಇಲ್ಲಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸೇರಲಿದ್ದಾರೆ. ಸಭೆಯು ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಜತೆಗೆ ಸಾಂಸ್ಥಿಕ ಚುನಾವಣೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಇತ್ತೀಚಿನ ಕೆಲವು ಪಕ್ಷಾಂತರದ ಬೆಳವಣಿಗಳು ಸೇರಿ ಪ್ರಮುಖ ವಿಷಯಗಳನ್ನು ಚರ್ಚಿಸಲು ಪಕ್ಷದ ಪ್ರಮುಖ ನಾಯಕರು ಬೇಡಿಕೆ ಇಟ್ಟಿದ್ದರಿಂದ ಕಾರ್ಯಕಾರಿ ಸಮಿತಿಯ ಸಭೆ ಕರೆಯಲಾಗಿದೆ.
ಪಕ್ಷದ ಘಟಕಗಳಲ್ಲಿನ ಗೊಂದಲ, ಉತ್ತರಪ್ರದೇಶ, ಪಂಜಾಬ್, ಛತ್ತೀಸ್ಗಡ ಮತ್ತು ಇತರ ರಾಜ್ಯಗಳಲ್ಲಿ ಎದುರಾಗಲಿರುವ ವಿಧಾನಸಭಾ ಚುನಾವಣೆಗಳು ಹಾಗೂ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬದಲಿಗೆ ಪಕ್ಷಕ್ಕೆ ಪೂರ್ಣಾವಧಿ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಸ್ತಾವದ ಬಗ್ಗೆ ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆ ಇದೆ.
ಕಾಂಗ್ರೆಸ್ ತೊರೆಯುತ್ತಿರುವ ನಾಯಕರು, ಪಕ್ಷದ ರಾಜ್ಯ ಘಟಕಗಳಲ್ಲಿನ ಬಂಡಾಯ, ಬಿಜೆಪಿ ಆಡಳಿತದ ಕೇಂದ್ರ ಮತ್ತು ರಾಜ್ಯಗಳ ವಿರುದ್ಧ ಯಶಸ್ವಿ ಪ್ರತಿಭಟನೆ ನಡೆಸಲು ಅಸಮರ್ಥವಾಗಿರುವುದು ಸೇರಿದಂತೆ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟುಗಳು ಸಭೆಯಲ್ಲಿ ಬಿರುಗಾಳಿ ಎಬ್ಬಿಸುವ ನಿರೀಕ್ಷೆಯಿದೆ.
ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಕೂಡ ಶೀಘ್ರದಲ್ಲೇ ಸಿಡಬ್ಲ್ಯುಸಿ ಸಭೆ ಕರೆಯುವಂತೆ ಕಾಂಗ್ರೆಸ್ ಅಧ್ಯಕ್ಷರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಕೂಡ ಪಕ್ಷಕ್ಕೆ ಪೂರ್ಣಾವಧಿಯ ಅಧ್ಯಕ್ಷರಿಲ್ಲದಿರುವ ಬಗ್ಗೆ ಪ್ರಶ್ನೆ ಎತ್ತಿದ್ದರು.
‘ಸಭೆ ಅ.16 (ಶನಿವಾರ) ಬೆಳಿಗ್ಗೆ 10 ಗಂಟೆಗೆ ನವದೆಹಲಿಯಎಐಸಿಸಿ ಕಚೇರಿಯಲ್ಲಿ ನಡೆಯಲಿದೆ. ಸದ್ಯದ ರಾಜಕೀಯ ಪರಿಸ್ಥಿತಿ, ಮುಂಬರುವ ವಿಧಾನಸಭಾ ಚುನಾವಣೆ ಮತ್ತು ಸಾಂಸ್ಥಿಕ ಚುನಾವಣೆಗಳ ಬಗ್ಗೆ ಚರ್ಚಿಸಲಾಗುವುದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.