ಮುಂಬೈ: ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳದ ಸರ್ಕಾರದ ನಡುವಣ ತಿಕ್ಕಾಟವನ್ನು ಉಲ್ಲೇಖಿಸಿರುವ ಶಿವಸೇನಾ, ದುರಹಂಕಾರದ ಚಂಡಮಾರುತ ಇನ್ನೂ ಬಂಗಾಳಕೊಲ್ಲಿಯಲ್ಲಿ ಸುಳಿದಾಡುತ್ತಿದೆ ಎಂದು ಹೇಳಿದೆ.
ಅಲ್ಲದೆ ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರವು ಒತ್ತಡ ಹೇರುವುದು ಸರಿಯಲ್ಲ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರಿಗೆ ಸಂಬಂಧಿಸಿದ ವಿವಾದ ಕುರಿತಂತೆ ಪ್ರತಿಕ್ರಿಯಿಸಿದೆ.
ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ಕುರಿತು ಉಲ್ಲೇಖಿಸಲಾಗಿದ್ದು, ರಾಜಕೀಯ ಸೋಲು ಗೆಲುವಿನ ಹೊರತಾಗಿರುವ ಕೇಂದ್ರ ಸರ್ಕಾರವು ವಿಶಾಲವಾದ ದೃಷ್ಟಿಕೋನವನ್ನು ಹೊಂದಿರಬೇಕು. ಇಲ್ಲದಿದ್ದರೆ ದೇಶದ ಏಕತೆಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದೆ.
ಮಾಜಿ ಪ್ರಧಾನಿಗಳಾದ ಮನಮೋಹನ್ ಸಿಂಗ್, ರಾಜೀವ್ ಗಾಂಧಿ, ನರಸಿಂಹ ರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅಧಿಕಾರವಧಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಯಾವುದೇ ರೀತಿಯ ಭಿನ್ನಭಿಪ್ರಾಯಗಳಿರಲಿಲ್ಲ ಎಂದು ತಿಳಿಸಿದೆ.
ಯಸ್ ಚಂಡಮಾರುತ ಬಂದು ಹೋಗಿದೆ. ಆದರೆ ದುರಂಹಕಾರದ ಚಂಡಮಾರತವು ಇನ್ನೂ ಬಂಗಾಳಕೊಲ್ಲಿಯಲ್ಲಿ ಸುಳಿದಾಡುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೆ ಬಂದೋಪಾಧ್ಯಾಯರು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ವೇಳೆಯಲ್ಲಿ ಕರೆದ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದಿದೆ.
ರಾಜ್ಯದ ಮುಖ್ಯಮಂತ್ರಿಯ ಆದೇಶಗಳನ್ನು ಪಾಲಿಸುತ್ತಿದ್ದರೆ ಅಧಿಕಾರಿಯು ಹೇಗೆ ಅಪರಾಧಿಯಾಗುತ್ತಾರೆ? ಹಾಗೊಂದು ವೇಳೆ ಪ್ರಧಾನಿ ಸಭೆಯಲ್ಲಿ ಭಾಗವಹಿಸಿದ್ದರೆ ರಾಜ್ಯ ಸರ್ಕಾರವು ಅವರ ಮೇಲೆ ಕ್ರಮ ಕೈಗೊಳ್ಳುತ್ತಿತ್ತು ಎಂದು ಹೇಳಿದೆ.