ಮಧ್ಯಾಹ್ನದ ಊಟ ಸೇವಿಸಲು ವಿದ್ಯಾರ್ಥಿಗಳ ವಿರೋಧ: ಅಡುಗೆ ಕೆಲಸದಿಂದ ದಲಿತ ಮಹಿಳೆ ವಜಾ

ಡೆಹರಾಡೂನ್: ದಲಿತ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ಸೇವಿಸಲು ಮೇಲ್ಜಾತಿಯ ವಿದ್ಯಾರ್ಥಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಕೆಲಸದಿಂದ ವಜಾ ಮಾಡಿರುವ ಘಟನೆ ಉತ್ತಾರಾಖಂಡ ರಾಜ್ಯದ ಚಂಪಾವತ್ ಜಿಲ್ಲೆಯ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.
ಚಂಪಾವತ್ ಜಿಲ್ಲೆಯ ಸುಖೀಧಂಗ್ನ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಈ ತಿಂಗಳ ಆರಂಭದಲ್ಲಿ ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿದ ಬಳಿಕ, ಆಕೆ ತಯಾರಿಸಿದ ಊಟವನ್ನು ಸೇವಿಸಲು ವಿದ್ಯಾರ್ಥಿಗಳು ನಿರಾಕರಿಸಿದ್ದರು. ಮನೆಯಿಂದಲೇ ಊಟದ ಬಾಕ್ಸ್ ತರುತ್ತಿದ್ದರು. ಮೇಲ್ಜಾತಿಯ ಮಹಿಳೆ ಸಂದರ್ಶನದಲ್ಲಿ ಭಾಗವಹಿಸಿದ್ದರೂ ಸಹ ದಲಿತ ಮಹಿಳೆಯನ್ನು ‘ಭೋಜನ ಮಾತೆ’ಯಾಗಿ ನೇಮಕ ಮಾಡಿದ್ದೇಕೆ? ಎಂದು ವಿದ್ಯಾರ್ಥಿಗಳ ಪೋಷಕರೂ ವಿರೋಧ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚಂಪಾಚತ್ ಜಿಲ್ಲೆಯ ಮುಖ್ಯ ಶಿಕ್ಷಣಾಧಿಕಾರಿ ಆರ್.ಸಿ. ಪುರೋಹಿತ್, ಆಕೆಯ ನೇಮಕಾತಿಯನ್ನು ರದ್ದು ಮಾಡಲಾಗಿದ್ದು, ನೇಮಕದ ವೇಳೆ ನಿಯಮಗಳ ಪಾಲನೆ ಆಗಿಲ್ಲ ಎಂದು ಹೇಳಿದ್ದಾರೆ.
‘ಆಕೆಯ ನೇಮಕಕ್ಕೆ ಉನ್ನತ ಅಧಿಕಾರಿಗಳು ಅನುಮೋದನೆ ನೀಡಿರಲಿಲ್ಲ. ಆದರೂ ಅವರನ್ನು ಭೋಜನ ಮಾತೆಯಾಗಿ ನೇಮಕ ಮಾಡಲಾಗಿತ್ತು’ಎಂದು ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.