ನವದೆಹಲಿ: ದಲಿತ ಬಾಲಕಿ ಅತ್ಯಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತೆ ಕುಟುಂಬಸ್ಥರನ್ನು ದೆಹಲಿಯಲ್ಲಿ ಬುಧವಾರ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
‘ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಒಂಬತ್ತು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಹಾಗಾಗಿ ಆಕೆಯ ಕುಟುಂಬಸ್ಥರಿಗೆ ಸಹಾಯ ಮಾಡುವುದು ನನ್ನ ಕರ್ತವ್ಯವಾಗಿದೆ’ ಎಂದು ಹೇಳಿದ್ದಾರೆ.
‘ಆಕೆಯ ಹೆತ್ತವರ ಕಣ್ಣೀರು ಒಂದೇ ಒಂದು ವಿಷಯವನ್ನು ಹೇಳುತ್ತಿದೆ. ಆಕೆ ಈ ದೇಶದ ಮಗಳು. ನ್ಯಾಯಕ್ಕೆ ಅರ್ಹಳಾಗಿದ್ದಾಳೆ. ಆದ್ದರಿಂದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆಕೆ ಕುಟುಂಬದ ಪರ ನಿಲ್ಲುತ್ತೇನೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ನೈರುತ್ಯ ದೆಹಲಿಯಲ್ಲಿ ನಡೆದ ಘಟನೆ ಕುರಿತು ದೆಹಲಿ ಮಹಿಳಾ ಆಯೋಗವು ತನಿಖೆ ಆರಂಭಿಸಿದೆ. ಜತೆಗೆ, ಬಾಲಕಿಯ ಪೋಷಕರು ಆಕೆಯ ಮೇಲೆ ಕಿಡಿಗೇಡಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದರು.
ಸಂಸತ್ತಿನಲ್ಲಿ ಮಂಗಳವಾರ ಇದೇ ವಿಚಾರವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷಗಳು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದವು. ಜತೆಗೆ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದ್ದರು.