ನವದೆಹಲಿ: ಉತ್ತರ ಪ್ರದೇಶದ ಮೀರತ್ನಲ್ಲಿ ಫೆಬ್ರವರಿ 28ರಂದು ನಡೆಯಲಿರುವ 'ಕಿಸಾನ್ ಮಹಾಪಂಚಾಯತ್'ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ.
ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಿಸಾನ್ ಮಹಾಪಂಚಾಯತ್ ಬೆಂಬಲ ನೀಡಲಿದೆ. ಈ ಸಾರ್ವಜನಿಕ ಸಭೆಯಲ್ಲಿ ರೈತರನ್ನು ಉದ್ದೇಶಿಸಿ ಅರವಿಂದ್ ಕೇಜ್ರಿವಾಲ್ ಮಾತನಾಡಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷವು ಟ್ವೀಟ್ ಮಾಡಿದೆ.
ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷವು ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದೆ. ಪ್ರಮುಖ ಪ್ರತಿಭಟನಾ ಸ್ಥಳವಾದ ದೆಹಲಿಯ ಸಿಂಘು ಗಡಿಗೆ ಕೇಜ್ರಿವಾಲ್ ಎರಡು ಬಾರಿ ಭೇಟಿ ನೀಡಿ ರೈತರಿಗೆ ಬೆಂಬಲ ನೀಡಿದ್ದಾರೆ.
'ಕೇಂದ್ರ ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಬೇಕು. ಮೂರು ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು' ಎಂದು ಕೇಜ್ರಿವಾಲ್ ಈ ಹಿಂದೆ ಒತ್ತಾಯಿಸಿದ್ದರು.
'ರೈತರು ಸಂತಸದಿಂದ ಇರದಿದ್ದರೆ, ದೇಶವೂ ಸಹ ಸಂತಸದಿಂದ ಇರಲು ಸಾಧ್ಯವಿಲ್ಲ' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.