ನವದೆಹಲಿ: ತಮ್ಮ ವಿರುದ್ದದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಮತ್ತೊಂದು ಕೋರ್ಟ್ಗೆ ವರ್ಗಾಯಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಚಿವ ಸತ್ಯೇಂದ್ರ ಜೈನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶನಿವಾರ ವಜಾಗೊಳಿಸಿತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಯೋಗೇಶ್ ಖನ್ನಾ, ‘ಎಲ್ಲ ವಾಸ್ತವಾಂಶಗಳನ್ನು ಪರಿಗಣಿಸಿಯೇ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರಕರಣವನ್ನು ವರ್ಗಾಯಿಸಿದ್ದಾರೆ’ ಎಂದರು.
‘ಈ ನಿರ್ಧಾರ ಕೈಗೊಳ್ಳುವ ವೇಳೆ ಕಾನೂನು ಪಾಲನೆಯಾಗಿಲ್ಲ ಎನ್ನಲಾಗದು ಅಥವಾ ಹೈಕೋರ್ಟ್ ಮಧ್ಯಪ್ರವೇಶಿಸುವ ಅಗತ್ಯ ಇದೆ ಎಂದು ಹೇಳಲಾಗದು’ ಎಂದೂ ನ್ಯಾಯಮೂರ್ತಿ ಖನ್ನಾ ಹೇಳಿದರು.
‘ಪ್ರಕರಣವನ್ನು ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿ, ಜೈನ್ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ, ಈ ವಿಷಯವನ್ನು ನ್ಯಾಯಾಧೀಶರ ದೃಷ್ಟಿಯಿಂದ ನೋಡದೇ, ಕಕ್ಷಿದಾರರ ದೃಷ್ಟಿಯಿಂದ ಗ್ರಹಿಸುವುದು ಮುಖ್ಯ’ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು.
ಜೈನ್ ವಿರುದ್ಧದ ಪ್ರಕರಣವನ್ನು ವಿಶೇಷ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರಿಂದ ವಿಶೇಷ ನ್ಯಾಯಾಧೀಶ ವಿಕಾಸ್ ಧುಲ ಅವರಿಗೆ ವರ್ಗಾಯಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿನಯಕುಮಾರ್ ಗುಪ್ತಾ ಸೆ.23ರಂದು ಆದೇಶಿಸಿದ್ದರು.