ನವದೆಹಲಿ: ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳನ್ನು ಸಂರಕ್ಷಿತಾ ವಲಯಗಳೆಂದು ಘೋಷಿಸುವ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ಆಗಾಗ್ಗೆ ನಡೆಯುತ್ತಿರುವ ಹಲ್ಲೆ ತಡೆಯಲು ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ದೆಹಲಿ ವೈದ್ಯಕೀಯ ಸಂಘವು (ಡಿಎಂಎ) ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಕೆಲಸದ ಸ್ಥಳದಲ್ಲಿ ಆರೋಗ್ಯ ಕ್ಷೇತ್ರದ ವೃತ್ತಿಪರರು ಮತ್ತು ಇತರ ಸಿಬ್ಬಂದಿ ಮೇಲೆ ರೋಗಿಗಳ ಸಂಬಂಧಿಕರು ಮತ್ತು ಸ್ನೇಹಿತರಿಂದ ಯಾವುದೇ ರೀತಿಯ ಹಲ್ಲೆ, ಹಿಂಸಾಚಾರ ಮತ್ತು ಗುಂಪು ಥಳಿತವನ್ನು ತಡೆಯುವ ನಿಟ್ಟಿನಲ್ಲಿ ಸುರಕ್ಷಿತವಾದ ವಾತಾವರಣ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಸೂಕ್ತವಾದ ಮಾರ್ಗಸೂಚಿಗಳನ್ನು ರಚಿಸಬೇಕೆಂದು ಡಿಎಂಎನ ಅಸ್ಸಾಂ ಅಧ್ಯಕ್ಷ ಡಾ. ಸತ್ಯಜಿತ್ ಬೋರಾಹ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ವೈದ್ಯಕೀಯ ಸೇವೆಯಲ್ಲಿರುವ ವೃತ್ತಿಪರರ ವಿರುದ್ಧದ ಹಲ್ಲೆ ಪ್ರಕರಣಗಳಲ್ಲಿ ತ್ವರಿತ ವಿಚಾರಣೆಗಳನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ವಕೀಲರಾದ ಸ್ನೇಹಾ ಕಾಳಿತಾ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.