ನವದೆಹಲಿ:ಕೋವಿಡ್ ಲಸಿಕೆಯ ಎರಡೂ ಡೋಸ್ ಪಡೆದ ಪ್ರವಾಸಿಗರಿಗೆ ಆರ್ಟಿಪಿಸಿಆರ್ ವರದಿ ಕಡ್ಡಾಯಗೊಳಿಸಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸೂಚಿಸಿದೆ.
ಈ ವಿಚಾರವಾಗಿ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಪ್ರವಾಸೋದ್ಯಮ ಇಲಾಖೆಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಭಾರತೀಯ ಪ್ರವಾಸೋದ್ಯಮ ಹಾಗೂ ಆತಿಥ್ಯ ಸಂಘಟನೆಗಳ ಒಕ್ಕೂಟದ ಜತೆ ಕೇಂದ್ರ ಪ್ರವಾಸೋದ್ಯಮ ಕಾರ್ಯದರ್ಶಿಗಳು ಆಗಸ್ಟ್ 5ರಂದು ನಡೆದ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಮಹಾರಾಷ್ಟ್ರ ಮತ್ತು ಸಿಕ್ಕಿಂ ರಾಜ್ಯಗಳು ಮಾತ್ರ ಲಸಿಕೆಯ ಎರಡೂ ಡೋಸ್ ಪಡೆದ ಪ್ರವಾಸಿಗರ ಪ್ರವೇಶಕ್ಕೆ ಆರ್ಟಿಪಿಸಿಆರ್ ವರದಿ ಇಲ್ಲದೆ ಅನುಮತಿ ನೀಡುತ್ತಿವೆ.
ಪಶ್ಚಿಮ ಬಂಗಾಳ (ಮುಂಬೈ, ಪುಣೆ ಮತ್ತು ಚೆನ್ನೈಯಿಂದ ಬರುವವರಿಗೆ), ಕರ್ನಾಟಕ, ಗೋವಾ ಮತ್ತು ಛತ್ತೀಸಗಡದಲ್ಲಿ ಲಸಿಕೆಯ ಎರಡೂ ಡೋಸ್ ಪಡೆದ ಪ್ರವಾಸಿಗರೂ ಆರ್ಟಿಪಿಸಿಆರ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.