ಚಂಡೀಗಡ: ‘ಹರಿಯಾಣದ ಮಾಜಿ ಸಚಿವ ಮನೀಶ್ ಗ್ರೋವರ್ ಅವರನ್ನು ಗುರಿಯಾಗಿಸಲು ಯಾರಾದರೂ ಪ್ರಯತ್ನಿಸಿದರೆ, ಅವರ ಕಣ್ಣು ಕಿತ್ತು, ಕೈ ಕತ್ತರಿಸಲಾಗುವುದು’ ಎಂದು ಬಿಜೆಪಿ ಸಂಸದ ಅರವಿಂದ್ ಶರ್ಮಾ ಬೆದರಿಕೆ ಹಾಕಿದ್ದಾರೆ.
ರೋಹ್ಟಕ್ನ ಕಿಲೊಯಿಯಲ್ಲಿ ಶುಕ್ರವಾರ ಮನೀಶ್ ಗ್ರೋವರ್ ಮತ್ತು ಕೆಲ ಬಿಜೆಪಿ ನಾಯಕರನ್ನು ದೇವಸ್ಥಾನವೊಂದರಲ್ಲಿ ಕೆಲ ಗಂಟೆಗಳ ಕಾಲ ತಡೆ ಹಿಡಿಯಲಾಗಿತ್ತು. ಇದನ್ನು ವಿರೋಧಿಸಿ ರೋಹ್ಟಕ್ನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಶನಿವಾರ ಪ್ರತಿಭಟನೆ ನಡೆಸಿದೆ.
ಈ ವೇಳೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಶರ್ಮಾ, ‘ಮನೀಶ್ ಗ್ರೋವರ್ ಅವರಿಂದಾಗಿ ದೀಪೆಂದರ್ ಹೂಡಾ ಲೋಕಸಭಾ ಚುನಾವಣೆಯಲ್ಲಿ ಸೋತರು. ಹೀಗಾಗಿ ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಹಾಗೂ ಅವರ ಪುತ್ರ ದೀಪೆಂದರ್ ಹೂಡಾ ಗ್ರೋವರ್ ಅವರನ್ನು ವಿರೋಧಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.