ನವದೆಹಲಿ:ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕೇಂದ್ರ ಸರ್ಕಾರವು ಹರಿಹಾಯ್ದಿದೆ.ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಮತ್ತು ಈ ಪ್ರತಿಭಟನೆ ಬಗ್ಗೆ ಸಹಾನುಭೂತಿ ಉಳ್ಳವರು ಈ ಕಾಯ್ದೆಗಳ ಒಂದೇ ಒಂದು ಲೋಪವನ್ನು ಎತ್ತಿ ತೋರಿಸಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ರೈತರ ಭಾವನೆಗಳಿಗೆ ಸ್ಪಂದಿಸುವ ಕಾರಣಕ್ಕಾಗಿ ಮಾತ್ರ ಈ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಸರ್ಕಾರ ಮುಂದಾಗಿತ್ತೇ ವಿನಹ, ಅವು ಗಳಲ್ಲಿ ಲೋಪ ಇದೆ ಎಂದಲ್ಲ ಎಂದು ತೋಮರ್ ಹೇಳಿದರು.
‘ಬೇಸಾಯ ಮಾಡಲು ನೀರು ಬೇಕು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ರಕ್ತವನ್ನು ಬಳಸಿಕೊಂಡು ಬೇಸಾಯ ಮಾಡುವುದು ಕಾಂಗ್ರೆಸ್ಗೆ ಮಾತ್ರ ಸಾಧ್ಯ. ಬಿಜೆಪಿಗೆ ಅದು ಸಾಧ್ಯವಿಲ್ಲ’ ಎಂದರು.
‘ಈ ಮೂರು ಕಾಯ್ದೆಗಳಲ್ಲಿ ಕರಾಳ ಏನಿದೆ ಎಂದು ನಾನು ರೈತ ಸಂಘಟನೆಗಳನ್ನು ಕಳೆದ ಎರಡು ತಿಂಗಳಿನಿಂದ ಕೇಳುತ್ತಲೇ ಇದ್ದೇನೆ. ಆದರೆ, ನನಗೆ ಉತ್ತರ ಸಿಕ್ಕಿಲ್ಲ. ಹಾಗೆಯೇ ಕಾಯ್ದೆಗಳಲ್ಲಿ ರೈತ ವಿರೋಧಿಯಾದದ್ದು ಏನಿದೆ ಎಂದು ಯಾರೂ ತೋರಿಸಿಕೊಟ್ಟಿಲ್ಲ’ ಎಂದು ತೋಮರ್ ಹೇಳಿದ್ದಾರೆ.
ರೈತರ ಪ್ರತಿಭಟನೆಯು 72ನೇ ದಿನ ಪೂರೈಸಿದೆ. ಪ್ರತಿಭಟನೆಯು ಈಗ ಬಿಜೆಪಿ ಆಳ್ವಿಕೆ ಇರುವ ಹರಿಯಾಣ ಮತ್ತು ಉತ್ತರ ಪ್ರದೇಶಕ್ಕೂ ವ್ಯಾಪಿಸಿದೆ. ಆದರೆ, ‘ಒಂದು ರಾಜ್ಯದ ರೈತರು ಮಾತ್ರ ಪ್ರತಿಭಟಿ ಸುತ್ತಿದ್ದಾರೆ.ಪ್ರತಿಭಟನೆ ನಡೆಸುವಂತೆ ಅವರಿಗೆ ಕುಮ್ಮಕ್ಕು ನೀಡಲಾಗುತ್ತಿದೆ’ ಎಂದು ತೋಮರ್ ಹೇಳಿದ್ದಾರೆ.