ರೈತರ ಪ್ರತಿಭಟನೆ ಸರ್ಕಾರದ ಮೇಲಿನ ನಂಬಿಕೆ ಕೊರತೆಯ ಸೂಚಕ: ಅಭಿಜಿತ್ ಬ್ಯಾನರ್ಜಿ

ನವದೆಹಲಿ: ಒಕ್ಕೂಟ ವ್ಯವಸ್ಥೆ ಮತ್ತು ಸರ್ಕಾರದ ಮೇಲಿನ ನಂಬಿಕೆ ಕೊರತೆ ಬಗ್ಗೆ ಮಾತನಾಡಿರುವ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ, ಸರ್ಕಾರದ ನಡೆಗಳ ಮೇಲಿನ ಅನುಮಾನವೇ ರೈತರ ಪ್ರತಿಭಟನೆಗೆ ಆರಣ ಎಂದು ಹೇಳಿದ್ದಾರೆ.
ವಿವಿಧ ರಾಜ್ಯಗಳ ರೈತರು ದೆಹಲಿಯ ಸಿಂಘು, ತಿಕ್ರಿ, ಗಾಝಿಪುರ ಹಾಗೂ ಚಿಲ್ಲಾ ಗಡಿಗಳಲ್ಲಿ ಎರಡು ವಾರಗಳಿಂದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
‘ರೈತರು ಸರ್ಕಾರದ ಉದ್ದೇಶಗಳ ಬಗ್ಗೆ ಅನುಮಾನದಿಂದ ವರ್ತಿಸುತ್ತಿದ್ದಾರೆ. ಈ ಸುಧಾರಣೆಗಳು ಉತ್ತಮವಾಗಿರಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿಲ್ಲ. ಬದಲಿಗೆ, ಅದಕ್ಕಿಂತ ಹೆಚ್ಚಿನದ್ದೇನೋ ಆಗಿರಲಿದೆ. ಇನ್ನೇನೋ ಹೆಚ್ಚು ಕೆಟ್ಟದ್ದಾಗಲಿದೆ ಎಂದು ಅವರು ಹೇಳುತ್ತಿದ್ದಾರೆ’ ಎಂದು ಮಾಧ್ಯಮ ಸಂಸ್ಥೆಯೊಂದರ ‘ನಾಯಕತ್ವ ಶೃಂಗಸಭೆ’ಯಲ್ಲಿ ಅಭಿಜಿತ್ ಹೇಳಿದ್ದಾರೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಕರ್ತವ್ಯ ನಿರತ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಕೋವಿಡ್ ಸೋಂಕು
ಸರ್ಕಾರ ಮತ್ತು ಜನರ ನಡುವಣ ನಂಬಿಕೆಯ ಕೊರತೆ ಬಗ್ಗೆ ಪುನರುಚ್ಚರಿಸಿದ ಅವರು, ಜನರಿಂದ ತುಂಬ ದೂರದಲ್ಲಿರುವವರು, ಕಡಿಮೆ ಸಂಪರ್ಕ ಹೊಂದಿರುವವರು ದೊಡ್ಡ ಶಾಸನಗಳನ್ನು ಮಾಡಿದಾಗ ಏನಾಗುತ್ತದೆ ಎಂಬುದಕ್ಕೆ ರೈತರ ಪ್ರತಿಭಟನೆ ಉದಾಹರಣೆ ಎಂದು ಹೇಳಿದ್ದಾರೆ.
ಕಾಯ್ದೆಗಳಿಗೆ ತಿದ್ದುಪಡಿ ತರುವ ಸರ್ಕಾರದ ಪ್ರಸ್ತಾವ ತಿರಸ್ಕರಿಸಿರುವ ರೈತರು ರದ್ದುಪಡಿಸಬೇಕೆಂದು ಪಟ್ಟುಹಿಡಿದಿದ್ದಾರೆ. ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ದೇಶದಾದ್ಯಂತ ರೈಲು ತಡೆ ಮಾಡುವುದಾಗಿಯೂ ಎಚ್ಚರಿಕೆಯನ್ನೂ ನೀಡಿದ್ದಾರೆ. ಪಂಜಾಬ್ನಲ್ಲಿ ಈಗಾಗಲೇ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.