ಗ್ವಾಲಿಯರ್ (ಮಧ್ಯಪ್ರದೇಶ): ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಮೂಲಕ ಗುಲಾಂ ನಬಿ ಆಜಾದ್ ಅವರು ಕೊನೆಗೂ ತಮ್ಮನ್ನು ತಾವು 'ಮುಕ್ತ'ಗೊಳಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ತೊರೆದು 2020ರಲ್ಲಿ ಬಿಜೆಪಿ ಸೇರಿದ ಸಿಂಧಿಯಾ ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, 'ಕಾಂಗ್ರೆಸ್ನ ಆಂತರಿಕ ಪರಿಸ್ಥಿತಿ ಹೇಗಿದೆ ಎಂಬುದು ಹಲವು ವರ್ಷಗಳಿಂದಲೂ ತಿಳಿದಿರುವ ಸಂಗತಿ. ಗುಲಾಂ ನಬಿ ಅವರು ಕೊನೆಗೂ ಸ್ವತಂತ್ರರಾಗಿದ್ದಾರೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿರುವುದಾಗಿ ವಿಮಾನಯಾನ ಸಚಿವ ಸಿಂಧಿಯಾ ತಿಳಿಸಿದ್ದಾರೆ. ಅವರು ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶದಲ್ಲಿನ ಪ್ರವಾಹ ಪರಿಸ್ಥಿತಿ ಅವಲೋಕನ ನಡೆಸುವ ಸಲುವಾಗಿ ಶನಿವಾರ ಗ್ವಾಲಿಯರ್ ಆಗಮಿಸಿದ್ದಾರೆ.
ಪಕ್ಷದ ಎಲ್ಲ ಹುದ್ದೆಗಳನ್ನೂ ತೊರೆದಿರುವಗುಲಾಂ ನಬಿ, ಕಾಂಗ್ರೆಸ್ ಜೊತೆಗಿನ ಸುಮಾರು ಐದು ದಶಕಗಳ ಬಾಂಧವ್ಯವನ್ನು ಶುಕ್ರವಾರ ಕಡಿದುಕೊಂಡಿದ್ದರು.
ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರ ರವಾನಿಸಿ ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ರಾಹುಲ್ ಅವರ ಅಪ್ರಬುದ್ಧತೆ ಮತ್ತು ಬಾಲಿಶ ಕ್ರಮಗಳು ಕಾಂಗ್ರೆಸ್ ಅನ್ನು ಸಂಪೂರ್ಣ ನಾಶ ಮಾಡಿವೆ ಎಂದು ಅವರು ಆರೋಪಿಸಿದ್ದರು.