ಮುಂಬೈ: ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಬುಧವಾರ ಸಿಬಿಐ ಮುಂದೆ ಹಾಜರಾದರು.
ಮುಂಬೈನ ಬಾರ್ ಮತ್ತು ರೆಸ್ಟೊರೆಂಟ್ಗಳಿಂದ ಪ್ರತಿ ತಿಂಗಳು ₹100 ಕೋಟಿ ವಸೂಲಿ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ದೇಶಮುಖ್ ಸೂಚಿಸಿದ್ದರು ಎಂದು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿತ್ತು.
ಸಾಂತಾಕ್ರೂಜ್ನಲ್ಲಿರುವ ಡಿಆರ್ಡಿಒ ಅತಿಥಿ ಗೃಹದಲ್ಲಿದ್ದ ಸಿಬಿಐ ತನಿಖಾ ತಂಡದ ಎದುರು ದೇಶಮುಖ್ ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೋಮವಾರ ದೇಶಮುಖ್ ಅವರಿಗೆ ನೋಟಿಸ್ ನೀಡಿತ್ತು.
ಇದುವರೆಗೆ, ಪರಮ್ ಬೀರ್ ಸಿಂಗ್, ಬಂಧನದಲ್ಲಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ, ಡಿಸಿಪಿ ರಾಜು ಭುಜಬಲ್, ಎಸಿಪಿ ಸಂಜಯ ಪಾಟೀಲ್, ವಕೀಲರಾದ ಜಯಶ್ರೀ ಪಾಟೀಲ್ ಮತ್ತು ಹೋಟೆಲ್ ಮಾಲೀಕ ಮಹೇಶ್ ಶೆಟ್ಟಿ ಅವರ ಹೇಳಿಕೆಗಳನ್ನು ಸಿಬಿಐ ದಾಖಲಿಸಿದೆ.
ಜತೆಗೆ, ದೇಶಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆ ಮತ್ತು ಆಪ್ತ ಕಾರ್ಯದರ್ಶಿ ಸಂಜೀವ್ ಪಳಾಂದೆ ಅವರ ವಿಚಾರಣೆ ನಡೆಸಿದೆ.