ಸಭೆಯ ಬಗ್ಗೆ ಅಮರಿಂದರ್ ಅವರ ಮಾಧ್ಯಮ ಸಲಹೆಗಾರರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ‘ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಶಾ ಅವರ ಜತೆ ಅಮರಿಂದರ್ ಚರ್ಚಿಸಿದರು. ಕಾಯ್ದೆಗಳನ್ನು ಶೀಘ್ರವೇ ರದ್ದುಪಡಿಸಿ ಎಂದು ಒತ್ತಾಯಿಸಿದರು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚಿಸಲೆಂದೇ ಶಾ ಅವರನ್ನು ಅಮರಿಂದರ್ ಭೇಟಿ ಮಾಡಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರಿಗೆ ಎಚ್ಚರಿಕೆ ರವಾನಿಸಲೆಂದೇ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದೂ ಕೆಲವು ಮೂಲಗಳು ಹೇಳಿವೆ.