ತಿರುವನಂತಪುರ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಪಡಿಸಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಶಾಸಕರು ಗುರುವಾರ ಕೇರಳ ವಿಧಾನಸಭೆಗೆ ಸೈಕಲ್ನಲ್ಲಿ ಬಂದರು.
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ವಿಷಯ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ಕಲ್ಪಿಸದ ಎಲ್ಡಿಎಫ್ ನೇತೃತ್ವದ ನಿಲುವನ್ನು ಖಂಡಿಸಿದ ಬಳಿಕ ಈ ಶಾಸಕರು ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಿದರು.
ಇಂಧನ ಬೆಲೆ ಕುರಿತು ಚರ್ಚಿಸಲು ಶೂನ್ಯವೇಳೆಯಲ್ಲಿ ಅವಕಾಶ ಕಲ್ಪಿಸಲು ಕೋರಿದ್ದರು. ಸರ್ಕಾರ ನಿರಾಕರಿಸಿತು. ಕೆಲಹೊತ್ತು ಸದನದಲ್ಲಿಯೇ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಬಳಿಕ ಸಭಾತ್ಯಾಗ ಮಾಡಿದರು.
ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ಇಂಧನದ ಮೇಲಿನ ತೆರಿಗೆಯನ್ನು ಇಳಿಸಬೇಕು ಹಾಗೂ ಈ ಕುರಿತು ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಪಡಿಸಿ ಕಳೆದ ವಾರವೂ ಯುಡಿಎಫ್ ಶಾಸಕರು ಧರಣಿ ನಡೆಸಿದ್ದರು.
ಆದರೆ, ರಾಜ್ಯದಲ್ಲಿನ ವಿವಿಧ ಜನೋಪಯೋಗಿ ಯೋಜನೆಗಳ ಮೇಲೆ ಪರಿಣಾಮ ಬೀರುವುದರಿಂದ ತೆರಿಗೆಯನ್ನು ಇಳಿಸಲಾಗದು ಎಂದು ಸರ್ಕಾರ ಆಗ ಸ್ಪಷ್ಟಪಡಿಸಿತ್ತು.
ಗುರುವಾರ ನಡೆದ ಸೈಕಲ್ ಜಾಥಾದ ನೇತೃತ್ವವನ್ನು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ವಹಿಸಿದ್ದರು. ಸಮೀಪದ ಎಂ.ಎಲ್.ಎ ಹಾಸ್ಟೆಲ್ನಿಂದ ವಿಧಾನ ಸಭೆವರೆಗೆ ಸೈಕಲ್ ಜಾಥಾ ನಡೆಯಿತು.