ತಿರುವನಂತಪುರಂ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಾವು ಸ್ಪರ್ಧಿಸುತ್ತಿರುವುದಕ್ಕೆ ಗಾಂಧಿ ಕುಟುಂಬದಲ್ಲಿ ಯಾರಿಗೂ ಸಮಸ್ಯೆ ಇಲ್ಲ ಎಂದು ಪಕ್ಷದ ಹಿರಿಯ ನಾಯಕ ಶಶಿ ತರೂರ್ ಸೋಮವಾರ ಹೇಳಿದ್ದಾರೆ.
ತಿರುವನಂತಪುರಂ ಸಂಸದ ತರೂರ್ ಅವರುಪಾಲಕ್ಕಾಡ್ ಜಿಲ್ಲೆಯ ಪಟ್ಟಂಬಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಬೆಳಗ್ಗಿನ ಅವಧಿ ಮುಗಿಯುತ್ತಿದ್ದಂತೆ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬಳಿಕ ಮಾತನಾಡಿರುವ ಅವರು, 'ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಬಂದಿದ್ದೆ. ಗಾಂಧಿ ಕುಟುಂಬದವರೊಂದಿಗೆ ಮಾತನಾಡಿದ್ದೇನೆ. ನಾನು ಸ್ಪರ್ಧಿಸುವುದಕ್ಕೆ ಅವರಿಗೇನು ಸಮಸ್ಯೆ ಇಲ್ಲ. ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ದೇಶದಾದ್ಯಂತ ಪ್ರತಿಕ್ರಿಯೆ ಪಡೆಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
ಕೇರಳ ನಾಯಕರ ಬೆಂಬಲ ಬಯಸುತ್ತಿದ್ದೀರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿರುವ ತರೂರ್, 'ಖಂಡತವಾಗಿಯೂ ಹೌದು. ಆದರೆ, ಎಲ್ಲರೂ ಬೆಂಬಲಿಸುವುದಿಲ್ಲ. ನಾಮಪತ್ರ ಸಲ್ಲಿಕೆ ಬಳಿಕ ನನಗೆ ಬೆಂಬಲ ಹೆಚ್ಚಾಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾದ ಶುಕ್ರವಾರ ತರೂರ್ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅ. 19ರಂದು ಫಲಿತಾಂಶ ಹೊರಬೀಳಲಿದೆ.