ಪಣಜಿ: ಮಹದಾಯಿ ನದಿ ತಿರುವು ಯೋಜನೆ ವಿವಾದವನ್ನು ಬಗೆಹರಿಸುವ ಸಂಬಂಧ ಶೀಘ್ರವೇ ‘ಮಹದಾಯಿ ನೀರು ನಿರ್ವಹಣಾ ಪ್ರಾಧಿಕಾರ’ವನ್ನು ರಚಿಸುವಂತೆ ಗೋವಾ ಸರ್ಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದೆ.
ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ನಿಯೋಗವು ನವದೆಹಲಿಯಲ್ಲಿ ಸಚಿವ ಶಾ ಅವರನ್ನು ಬುಧವಾರ ಭೇಟಿ ಮಾಡಿ, ಈ ಮನವಿ ಮಾಡಿದೆ. ಶಾ ಅವರನ್ನು ಭೇಟಿ ಮಾಡಿದ ನಂತರ ಈ ಬಗ್ಗೆ ಸಾವಂತ್ ಅವರು ಟ್ವೀಟ್ ಮಾಡಿದ್ದಾರೆ.
ಮಹದಾಯಿ ನದಿಗೆ ಅಣೆಕಟ್ಟು ನಿರ್ಮಿಸುವ ಸಂಬಂಧ ಕರ್ನಾಟಕ ಸರ್ಕಾರ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಜಲ ಆಯೋಗವು ಒಪ್ಪಿಗೆ ನೀಡಿರುವ ಬಗ್ಗೆಯೂ ನಿಯೋಗ ಆಕ್ಷೇಪ ವ್ಯಕ್ತಪಡಿಸಿದೆ.
ಕೇಂದ್ರ ಸಚಿವ ಶ್ರೀಪಾದ್ ನಾಯ್ಕ, ರಾಜ್ಯಸಭಾ ಸದಸ್ಯ ವಿನಯ ತೆಂಡುಲ್ಕರ್, ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್, ಅರಣ್ಯ ಸಚಿವ ವಿಶ್ವಜಿತ್ ರಾಣೆ, ಸ್ಪೀಕರ್ ರಮೇಶ್ ತಾವಡಕರ್ ನಿಯೋಗದಲ್ಲಿದ್ದರು.
‘ಮಹದಾಯಿ: ಶೀಘ್ರ ಪರಿಹಾರ’ ಪಣಜಿ: ಮಹದಾಯಿ ನದಿ ತಿರುವು ಯೋಜನೆ ವಿವಾದಕ್ಕೆ ಶೀಘ್ರವೇ ಪರಿಹಾರ ಕಂಡುಹಿಡಿಯಲಾಗುವುದು ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಗುರುವಾರ ಹೇಳಿದ್ದಾರೆ.
‘ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ನಿಯೋಗವು ನನ್ನನ್ನು ದೆಹಲಿಯಲ್ಲಿ ನನ್ನ ನಿವಾಸದಲ್ಲಿ ಭೇಟಿ ಮಾಡಿತು. ಮಹದಾಯಿ ನದಿ ತಿರುವು ಯೋಜನೆ ಕುರಿತು ಈ ವೇಳೆ ಚರ್ಚೆ ನಡೆಸಿದೆವು. ಈ ವಿವಾದಕ್ಕೆ ಶೀಘ್ರವೇ ಪರಿಹಾರ ಕಂಡುಹಿಡಿಯುವ ವಿಶ್ವಾಸ ಹೊಂದಿರುವೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.