ಪಣಜಿ: ಪಕ್ಷ ತೊರೆದು ಬಿಜೆಪಿ ಸೇರಿದ್ದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್ ಹಾಗೂ ಮಹಾರಾಷ್ಟ್ರವಾದಿ ಗೋಮಾಂತರ ಪಾರ್ಟಿ (ಎಂಜಿಪಿ) ಸಲ್ಲಿಸಿದ್ದ ಅರ್ಜಿಗಳನ್ನು ಗೋವಾ ವಿಧಾನಸಭೆ ಸ್ಪೀಕರ್ ರಾಜೇಶ್ ಪಾಟ್ನೇಕರ್ ಮಂಗಳವಾರ ವಜಾಗೊಳಿಸಿದರು.
ಕಾಂಗ್ರೆಸ್ನ 10 ಹಾಗೂ ಎಂಜಿಪಿಯ ಇಬ್ಬರು ಶಾಸಕರು 2019ರಲ್ಲಿ ಬಿಜೆಪಿ ಸೇರಿದ್ದರು. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಈಗ ಬಿಜೆಪಿ ಶಾಸಕರ ಸಂಖ್ಯೆ 27 ಇದೆ.
ಕಾಂಗ್ರೆಸ್ನ ಗೋವಾ ಘಟಕದ ಅಧ್ಯಕ್ಷ ಗಿರೀಶ್ ಚೋಡಾನಕರ್, ಎಂಜಿಪಿಯ ಮುಖಂಡ ಸುದಿನ್ ಧವಳೀಕರ್ ಅವರು ಪ್ರತ್ಯೇಕ ಅರ್ಜಿ ಸಲ್ಲಿಸಿ, ತಮ್ಮ ಪಕ್ಷ ತೊರೆದು ಬಿಜೆಪಿ ಸೇರಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದರು.
ಯಾವುದೇ ಕಾರಣಗಳನ್ನು ನೀಡದೆಯೇ ಈ ಎರಡೂ ಅರ್ಜಿಗಳನ್ನು ವಜಾಗೊಳಿಸಿ ಸ್ಪೀಕರ್ ಮೌಖಿಕ ಆದೇಶ ನೀಡಿದ್ದಾರೆ.
‘ಸ್ಪೀಕರ್ ಅವರ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಅದು ಕೈ ಸೇರಿದ ನಂತರ, ಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಚೋಡಾನಕರ್ ಪರ ವಕೀಲ ಅಭಿಜಿತ್ ಗೋಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
‘ಅರ್ಜಿ ವಜಾಗೊಳಿಸಲು ಸ್ಪೀಕರ್ ಅವರು ನೀಡಿರುವ ಕಾರಣಗಳನ್ನು ಪರಿಶೀಲಿಸಿದ ನಂತರ ನಮ್ಮ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು’ ಎಂದು ಎಂಜಿಪಿ ಪರ ವಕೀಲ ಸಿ.ಎ.ಫೆರೀರಾ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.