ನವದೆಹಲಿ: ‘ದೇಶದಲ್ಲಿರುವ ಕೋವಿಡ್ ಬಿಕ್ಕಟ್ಟನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿರುವ ಸರ್ಕಾರ ‘ಲಸಿಕೆ ಉತ್ಸವ‘ದ ಮೂಲಕ ಜನರನ್ನು ತೃಪ್ತಿಪಡಿಸಲು ಹೊರಟಿದೆ‘ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕೊರೊನಾ ಸೊಂಕಿನ ಪರೀಕ್ಷೆ ಸರಿಯಾಗಿ ನಡೆಯುತ್ತಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಕೆಲವು ಕಡೆ ವೆಂಟಿಲೇಟರ್ ಅಥವಾ ಆಕ್ಸಿಜನ್ ಇಲ್ಲ. ಅಲ್ಲದೆ ಲಸಿಕೆಯೂ ಸಿಗುತ್ತಿಲ್ಲ‘ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋವಿಡ್ 19 ಬಿಕ್ಕಟ್ಟನ್ನು ನಿರ್ವಹಣೆ ಮಾಡುವುದಕ್ಕಾಗಿ ಪಿಎಂ–ಕೇರ್ಸ್ಗೆ ಬಹುದೊಡ್ಡ ಪ್ರಮಾಣದಲ್ಲಿ ದೇಣಿಗೆ ಬಂದಿದೆ. ಸರ್ಕಾರ ಆ ಹಣವನ್ನು ಏನು ಮಾಡುತ್ತಿದೆ‘ ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
‘ಸೋಂಕಿನ ಪರೀಕ್ಷೆ ಇಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ, ಆಕ್ಸಿಜಿನ್, ವೆಂಟಿಲೇಟರ್ ಇಲ್ಲ. ಆದರೆ, ಸರ್ಕಾರ ಲಸಿಕೆ ಉತ್ಸವವನ್ನು ಆಚರಿಸುತ್ತಿದೆ. ಹಾಗಾದರೆ ಪಿಎಂ–ಕೇರ್ಸ್ ಏನು ಮಾಡುತ್ತಿದೆ ? ಎಂದು ರಾಹುಲ್ ಕೇಳಿದ್ದಾರೆ.