ನವದೆಹಲಿ: ರಾಜ್ಯಪಾಲರು ಜನರು ಮತ್ತು ಸರ್ಕಾರಕ್ಕೆ ‘ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕ’ರಿದ್ದಂತೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಪ್ರತಿಪಾದಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್ಗಳ 51ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ರಾಜ್ಯಪಾಲರು ತಮ್ಮ ರಾಜ್ಯಗಳಲ್ಲಿ ಸಾಧ್ಯವಾದಷ್ಟು ಸಮಯವನ್ನು ಜನತೆಗೆ ನೀಡಬೇಕು. ಜತೆಗೆ ಸಾರ್ವಜನಿಕರೊಂದಿಗೆ ಉತ್ಸಾಹಭರಿತ ಸಂಪರ್ಕಗಳನ್ನು ಹೊಂದಿರಬೇಕು. ರಾಜ್ಯದ ಜನರ ಕಲ್ಯಾಣ ಮತ್ತು ಸೇವೆ ಖಚಿತಪಡಿಸಿಕೊಳ್ಳಲು ಅವರು ಬದ್ಧರಾಗಿರುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
‘ನೀವೆಲ್ಲರೂ ಕೆಲವು ಕಾರ್ಯಕ್ರಮಗಳ ಮೂಲಕ ಎಲ್ಲ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದ್ದೀರಿ ಎಂಬ ಖಾತ್ರಿ ನನಗಿದೆ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಸಾಮಾನ್ಯ ಜನರೊಂದಿಗೆ ನಿರಂತರ ಸಂಪರ್ಕ ಕಾಪಾಡಿಕೊಳ್ಳಬೇಕು’ ಎಂದು ಕೋವಿಂದ್ ಹೇಳಿದರು.
ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ದೇಶ ನಡೆಸುತ್ತಿರುವ ಹೋರಾಟವನ್ನು ಶ್ಲಾಘಿಸಿದ ರಾಷ್ಟ್ರಪತಿ, ಈ ಹೋರಾಟದಲ್ಲಿ ರಾಜ್ಯಪಾಲರ ಪಾತ್ರವೂ ಮಹತ್ವದ್ದಾಗಿದೆ. ರಾಜ್ಯಪಾಲರುಗಳು ಸಕ್ರಿಯ ಕೊಡುಗೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.