ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಮತ್ತು ಇತರೆ ಆರೋಪಿಗಳಿಗೆ ಪ್ರತಿಕ್ರಿಯೆ ದಾಖಲಿಸಲು ದೆಹಲಿ ಹೈಕೋರ್ಟ್ ಇನ್ನಷ್ಟು ಸಮಯಾವಕಾಶ ನೀಡಿದೆ. ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಈ ಕುರಿತು ಪ್ರಕರಣ ದಾಖಲಿಸಿದ್ದರು.
ನ್ಯಾಯಮೂರ್ತಿ ಸುರೇಶ್ ಕುಮಾರ್ ಅವರು ಪ್ರಕರಣದ ವಿಚಾರಣೆಯನ್ನು ಮೇ 18ಕ್ಕೆ ನಿಗದಿಪಡಿಸಿದರು. ಹಿರಿಯ ವಕೀಲರಾದ ಆರ್.ಎಸ್.ಚೀಮಾ ಮತ್ತು ತನನ್ನುಮ್ ಚೀಮಾ ಕಾಂಗ್ರೆಸ್ ಮುಖಂಡರ ಪರವಾಗಿ ಹಾಜರಿದ್ದು, ‘ಕೋವಿಡ್ ಕಾರಣದಿಂದ ಅವರ ಕಚೇರಿ ಮುಚ್ಚಿದ್ದು, ಪ್ರತಿಕ್ರಿಯೆ ದಾಖಲಿಸಲು ಆಗಿಲ್ಲ. ಇನ್ನಷ್ಟು ಸಮಯ ನೀಡಬೇಕು’ ಎಂದು ಮನವಿ ಮಾಡಿದರು.
ಪ್ರತಿಕ್ರಿಯೆ ದಾಖಲಿಸಲು ಸೂಚಿಸಿ ಫೆಬ್ರುವರಿ 22ರಂದು ನೋಟಿಸ್ ನೀಡಿದ್ದ ಹೈಕೋರ್ಟ್ ಅಲ್ಲಿಯವರೆಗೂ ವಿಚಾರಣೆಗೆ ತಡೆ ನೀಡಿತ್ತು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಅವರಿಗೆ ನೋಟಿಸ್ ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.