ನಾಗಪುರ: ಜೆಇಇ ಮುಖ್ಯ ಪರೀಕ್ಷೆಗೆ ತಡೆಯಾಜ್ಞೆ ನೀಡಲು ಬಾಂಬೆ ಹೈಕೋರ್ಟ್ ನಾಗಪುರ ಪೀಠ ನಿರಾಕರಿಸಿದೆ. ಆದರೆ, ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಿಲ್ಲದ ಪ್ರವಾಹ ಪೀಡಿತ ವಿದರ್ಭ ವಲಯದ ಯಾವುದೇ ವಿದ್ಯಾರ್ಥಿಯು ಮರು ಪರೀಕ್ಷೆ ನಡೆಸುವಂತೆ ಎನ್ಟಿಎಗೆ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದೆ.
ನ್ಯಾಯಮೂರ್ತಿಗಳಾದ ರವಿ ದೇಶಪಾಂಡೆ ಮತ್ತು ಪುಷ್ಪಾ ಗನೇಡಿವಾಲಾ ಅವರಿದ್ದ ವಿಭಾಗೀಯ ಪೀಠವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ಇಂಥ ಅರ್ಜಿಗಳನ್ನು ಪರಿಗಣಿಸಿ, ವಸ್ತುಸ್ಥಿತಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿತು.
ಎಂಜಿನಿಯರಿಂಗ್ ಜಂಟಿ ಪ್ರವೇಶ ಪ್ರವೇಶ ಪರೀಕ್ಷೆಯು (ಜೆಇಇ-ಮೇನ್) ಮಂಗಳವಾರ ದೇಶದಾದ್ಯಂತ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿದೆ. ಪ್ರವಾಹದ ಕಾರಣ ರಾಜ್ಯದ ಅನೇಕ ಕಡೆ ಗಂಭೀರ ಸ್ಥಿತಿ ಇದೆ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳು ಬವಣೆ ಪಡುವಂತಾಗಬಾರದು ಎಂದು ಪೀಠ ಅಭಿಪ್ರಾಯಪಟ್ಟಿತು.
ವಿದ್ಯಾರ್ಥಿಗಳು ಸಲ್ಲಿಸುವ ಅರ್ಜಿ ಕುರಿತಂತೆ ಸಂಬಂಧಿಸಿದ ಜಿಲ್ಲಾಧಿಕಾರಿಗಳ ಜೊತೆಗೆ ಚರ್ಚಿಸಿ ಎನ್ಟಿಎ 15 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಪೀಠ ಆದೇಶಿಸಿದೆ.