ನವದೆಹಲಿ:ಅಲ್ಪಾವಧಿ ಕರ್ತವ್ಯದ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರೋಧಿಸಿ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಿಂದ ಭಾನುವಾರ (ಜೂನ್ 19) ಒಂದೇ ದಿನ 483 ರೈಲುಗಳ ಸಂಚಾರ ರದ್ದಾಗಿದೆ.
ಅಧಿಕಾರಿಗಳು ನಿಡಿರುವ ಮಾಹಿತಿ ಪ್ರಕಾರ, 229 ಎಕ್ಸ್ಪ್ರೆಸ್ ರೈಲುಗಳ, 254 ಪ್ಯಾಸೆಂಜರ್ ರೈಲುಗಳ ಸಂಚಾರ ರದ್ದಾಗಿದೆ. ಹೆಚ್ಚುವರಿಯಾಗಿ 8 ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ.
ತೀವ್ರ ಪ್ರತಿಭಟನೆಗೆ ಗುರಿಯಾಗಿರುವ ಪೂರ್ವ ಮಧ್ಯ ವಲಯದಲ್ಲಿ, ಪಶ್ಚಿಮ ಬಂಗಾಳದ ವಿವಿಧ ಪ್ರದೇಶಗಳನ್ನು ಕೋಲ್ಕತ್ತದೊಂದಿಗೆ ಸಂಪರ್ಕಿಸುವ ಮಾರ್ಗಗಳ ಮಧ್ಯೆ 29 ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಇದರಲ್ಲಿ ಹೌರಾ–ನವದೆಹಲಿ ರಾಜಧಾನಿ ಎಕ್ಸ್ಪ್ರೆಸ್ ಸಹ ಸೇರಿದೆ.
ಹಿಂಸಾತ್ಮಕ ಪ್ರತಿಭಟನೆಗೆ ಗುರಿಯಾಗಿರುವ ರೈಲ್ವೆಯು ಈವರೆಗೆ ಅಪಾರ ಪ್ರಮಾಣದ ನಷ್ಟ ಅನುಭವಿಸಿದೆ.
‘ಅಗ್ನಿಪಥ’ ವಿರುದ್ಧದ ಪ್ರತಿಭಟನೆಯ ಆರಂಭದಲ್ಲೇ ಉತ್ತರ ಭಾರತದ ಹಲವೆಡೆ ಪ್ರತಿಭಟನಾಕಾರರು ರೈಲುಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು. ಬಿಹಾರ, ಉತ್ತರ ಪ್ರದೇಶಗಳಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು.