ನವದೆಹಲಿ: ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಚುನಾವಣೆಗೆ ಒಲವು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ‘ಪಕ್ಷವನ್ನು ಯಾರು ಮುನ್ನಡೆಸಬೇಕೆಂದು ಕಾರ್ಯಕರ್ತರು ನಿರ್ಧರಿಸುವರು. ಪಕ್ಷ ನನಗೆ ಏನು ಮಾಡಲು ಹೇಳುತ್ತದೋ ನಾನು ಅದನ್ನೇ ಮಾಡುವೆ’ ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ‘ಪಕ್ಷದೊಳಗಿನ ಸಾಂಸ್ಥಿಕ ಚುನಾವಣೆಗಳು ಸರಿಯಾದ ಸಮಯಕ್ಕೆ ನಡೆಯಲಿವೆ. ಅದರೆ, ಈಗ ಆಗಬೇಕಿರುವುದು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವುದು ಹಾಗೂ ಜನರ ಜೀವವನ್ನು ಉಳಿಸುವ ಕೆಲಸ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಜವಾಬ್ದಾರಿಯನ್ನು ವಹಿಸಿಕೊಂಡ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಬಂದಿದ್ದರು.
ಪಕ್ಷವನ್ನು ಮುನ್ನಡೆಸಲು ಸಿದ್ಧರಿದ್ದೀರಾ ಎನ್ನುವ ಪ್ರಶ್ನೆಗೆ ‘ಪಕ್ಷವನ್ನು ಯಾರು ಮುನ್ನಡೆಸಬೇಕು ಎಂದು ಪಕ್ಷದ ಕಾರ್ಯಕರ್ತರು ನಿರ್ಧರಿಸಬೇಕು. ಪಕ್ಷವು ಏನು ಮಾಡಬೇಕೆಂದು ನಾನು ಬಯಸುತ್ತೇನೋ ಅದನ್ನು ಮಾಡುತ್ತೇನೆ’ ಎಂದು ಉತ್ತರಿಸಿದರು.