ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೃತ’ದ ಶತಮಾನ ಧ್ಯಾನ; ಐದು ಪ್ರತಿಜ್ಞೆ ಕೈಗೊಳ್ಳಲು ಜನರಿಗೆ ಪ್ರಧಾನಿ ಮೋದಿ ಕರೆ

76ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ
Last Updated 15 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು 2047ರ ಹೊತ್ತಿಗೆ ನನಸು ಮಾಡು ವುದಕ್ಕಾಗಿ ದೇಶದ ಜನರು ಐದು ಪ್ರತಿಜ್ಞೆಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ.

ಭಾರತವನ್ನು ಅಭಿವೃದ್ಧಿ ಹೊಂದಿದದೇಶವಾಗಿ ಪರಿವರ್ತಿಸಲು ಗುಲಾಮಗಿರಿಯ ಪ್ರತಿಯೊಂದು ಎಳೆಯನ್ನೂ ನಿರ್ಮೂಲನ ಮಾಡ ಬೇಕು, ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು, ಏಕತೆ ಮತ್ತು ಸಮಗ್ರತೆ ಕಾಯ್ದುಕೊಳ್ಳಬೇಕು, ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸು ಮಾಡಬೇಕು, ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು’ ಎಂದು ಪ್ರಧಾನಿ ಹೇಳಿದ್ದಾರೆ.

76ನೇ ಸ್ವಾತಂತ್ರ್ಯೋತ್ಸವ ಭಾಗವಾಗಿ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಪ್ರಧಾನಿ ಸೋಮವಾರ ಮಾತನಾಡಿದರು. ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿ ದೇಶವು ಅಭಿವೃದ್ಧಿ ಹೊಂದಿದ ದೇಶ ಎಂದು ಕರೆಸಿಕೊಳ್ಳಬೇಕು ಎಂಬ ಕನಸನ್ನು ಅವರು ಬಿತ್ತಿದರು.

76ನೇ ಸ್ವಾತಂತ್ರ್ಯೋತ್ಸವವು‘ಅಮೃತ ಕಾಲ’ದ ಮೊದಲ ಮುಂಜಾವಿಗೆ ಸಾಕ್ಷಿಯಾಯಿತು ಎಂದು ಅವರು ಹೇಳಿದರು. ಜನರು ಸ್ವ–ಹೊಗಳಿಕೆಯಲ್ಲಿ ನಿರತರಾಗಿ 75 ವರ್ಷಗಳ ಸಾಧನೆಗಾಗಿ ಬೆನ್ನು ತಟ್ಟುತ್ತಾ ಕುಳಿತರೆ ದೇಶದ ಕನಸು ಮರೆಯಾಗಿ ಹೋಗಬಹುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದರು.

ಅದಕ್ಕೂ ಮೊದಲು ಅವರು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದರು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಫಿರಂಗಿಗಳಿಂದ 21 ಸುತ್ತು ಕುಶಾಲು ತೋಪು ಹಾರಿಸಲಾಯಿತು. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಫಿರಂಗಿಗಳನ್ನು ಸ್ವಾತಂತ್ರ್ಯದ ಬಳಿಕದ 75 ವರ್ಷಗಳಲ್ಲಿ ಇದೇ ಮೊದಲ ಬಾರಿಗೆಬಳಸಲಾಗಿದೆ ಎಂಬುದನ್ನು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಸಹಕಾರಿ ಒಕ್ಕೂಟ ವ್ಯವಸ್ಥೆ ಇರಬೇಕು ಎಂಬುದನ್ನು ಬಲವಾಗಿ ಪ್ರತಿಪಾದಿಸಿದ ಅವರು, ದೇಶದ ವೈವಿಧ್ಯ, ಪೌರರ ನಡುವಣ ಒಗ್ಗಟ್ಟು, ಲಿಂಗ ಸಮಾನತೆ, ಸಂಶೋಧನೆ ಮತ್ತು ನಾವೀನ್ಯವನ್ನು ಸಂಭ್ರಮಿಸಬೇಕಿದೆ ಎಂದರು.

ಪ್ರಧಾನಿ ಭಾಷಣವುಹಲವು ಬುದ್ಧಿಮಾತುಗಳಿಂದ ಕೂಡಿತ್ತು. 82 ನಿಮಿಷಗಳಷ್ಟು ದೀರ್ಘವಾಗಿತ್ತು. ಮಹಿಳೆಯರಿಗೆ ಅವಮಾನ ಆಗುವಂತಹ ವಿಕೃತಿಗಳು ನಮ್ಮ ವರ್ತನೆಯಲ್ಲಿ ಇದ್ದು, ಅವುಗಳನ್ನು ತೊಡೆದು ಹಾಕಲು ಹೇಳಿದರು.

ಸಂಶೋಧನೆ ಮತ್ತು ನಾವೀನ್ಯಕ್ಕೆ ಒತ್ತು ನೀಡುವುದಕ್ಕಾಗಿ ‘ಜೈ ಅನುಸಂಧಾನ್‌’ (ಜೈ ನಾವೀನ್ಯ) ಎಂಬ ಹೊಸ ಘೋಷಣೆಯನ್ನು ಪ್ರಧಾನಿ ಕೊಟ್ಟರು.

ಪ್ರಧಾನಿಯವರು ಯಾವುದೇ ಹೊಸ ಯೋಜನೆಯನ್ನು ಪ್ರಕಟಿಸಲಿಲ್ಲ. ಹಿಂದಿನ ವರ್ಷಗಳ ಭಾಷಣಗಳಲ್ಲಿ ಅವರು ವಿವಿಧ ಯೋಜನೆಗಳನ್ನು ಘೋಷಿಸಿದ್ದರು. ಅವರಿಗಿಂತ ಹಿಂದೆ ಪ್ರಧಾನಿ ಹುದ್ದೆಯಲ್ಲಿದ್ದವರು ಕೂಡ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸಿದ್ದರು.

ಭಾಷಾ ವೈವಿಧ್ಯಕ್ಕೆ ಹೆಮ್ಮೆ: ‘ಭಾಷಾ ತೊಡಕು ನಮ್ಮ ಪ್ರತಿಭೆಗೆ ಅಡ್ಡಿಯಾಗಿದ್ದರೂ ದೇಶದಲ್ಲಿ ಇರುವ ಭಾಷಾ ವೈವಿಧ್ಯದ ಬಗ್ಗೆ ಹೆಮ್ಮೆಪಡಬೇಕು’ ಎಂದು ಪ್ರಧಾನಿ ಹೇಳಿದ್ದಾರೆ.ಪ್ರಧಾನಿ ಭಾಷಣವು ಹಲವು ಬುದ್ಧಿಮಾತುಗಳಿಂದ ಕೂಡಿತ್ತು. 82 ನಿಮಿಷಗಳಷ್ಟು ದೀರ್ಘವಾಗಿತ್ತು.

ಪ್ರಧಾನಿ ಯಾವುದೇ ಹೊಸ ಯೋಜನೆ ಪ್ರಕಟಿಸಲಿಲ್ಲ. ಹಿಂದಿನ ವರ್ಷಗಳ ಭಾಷಣಗಳಲ್ಲಿ ಅವರು ವಿವಿಧ ಯೋಜನೆಗಳನ್ನು ಘೋಷಿಸಿದ್ದರು. ಅವರಿಗಿಂತ ಹಿಂದೆ ಪ್ರಧಾನಿ ಹುದ್ದೆಯಲ್ಲಿದ್ದವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೊಸ ಯೋಜನೆಗಳನ್ನು ಪ್ರಕಟಿಸಿದ್ದರು.

ನಾರಿಶಕ್ತಿಗೆ ಬಲ, ಲಿಂಗ ಸಮಾನತೆಗೆ ಒತ್ತು
‘ನಮ್ಮ ನಡತೆಯೊಳಗೆ ವಿಕೃತಿಯೊಂದು ನುಸುಳಿದೆ. ಕೆಲವೊಮ್ಮೆ ನಾವು ಮಹಿಳೆಯರನ್ನು ಅವಮಾನಿಸುತ್ತೇವೆ. ಇಂತಹ ವರ್ತನೆಯನ್ನು ಬಿಟ್ಟುಬಿಡುತ್ತೇವೆ ಎಂಬ ಪ್ರತಿಜ್ಞೆ ಮಾಡಬಹುದೇ’ ಎಂದು ಮೋದಿ ಪ್ರಶ್ನಿಸಿದ್ದಾರೆ. ಮಹಿಳೆಯ ಘನತೆಯನ್ನು ಕುಗ್ಗಿಸುವ ಏನನ್ನೂ ಮಾಡಬಾರದು. ‘ನಾರಿ ಶಕ್ತಿ’ಯನ್ನು ಬೆಂಬಲಿಸಬೇಕಾದ ಅಗತ್ಯ ಇದೆ ಎಂದೂ ಅವರು ಹೇಳಿದ್ದಾರೆ.

ಲಿಂಗ ಸಮಾನತೆಯು ಭಾರತದ ಒಗ್ಗಟ್ಟಿಗೆ ಬಹಳ ಮುಖ್ಯ. ಭಾರತದ ವೈವಿಧ್ಯವನ್ನು ನಾವು ಕುಟುಂಬದೊಳಗೂ ಸಂಭ್ರಮಿಸಬೇಕು. ಮಗ ಮತ್ತು ಮಗಳನ್ನು ಸಮಾನ ಎಂದು ನೋಡಿದರೆ ಒಗ್ಗಟ್ಟಿನ ಬೀಜ ಬಿತ್ತಿದಂತಾಗುತ್ತದೆ. ಅದು ಸಾಧ್ಯವಾಗದಿದ್ದರೆ ಒಗ್ಗಟ್ಟಿನ ಮಂತ್ರವು ಅನುರಣಿಸದು ಎಂದು ಪ್ರಧಾನಿ ಹೇಳಿದ್ದಾರೆ.

ಕುಟುಂಬವು ಹಲವು ತಲೆಮಾರುಗಳ ಕಾಲ ಲಿಂಗ ತಾರತಮ್ಯದ ಬೀಜ ಬಿತ್ತಿದರೆ ಸಮಾಜದಲ್ಲಿ ಒಗ್ಗಟ್ಟಿನ ಸ್ಫೂರ್ತಿಯು ಕಾಣ ಸಿಗದು. ಲಿಂಗ ಸಮಾನತೆಯು ನಮ್ಮ ಮೊದಲ ಭರವಸೆ. ಒಗ್ಗಟ್ಟಿನ ಮಹತ್ವದ ಮಾನದಂಡವೇ ಲಿಂಗ ಸಮಾನತೆ ಎಂದು ಅವರು ವಿವರಿಸಿದರು.

ನೆಹರೂ, ಸಾವರ್ಕರ್‌ ನೆನಪು
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಹಿಂದುತ್ವವಾದಿ ವಿ.ಡಿ. ಸಾವರ್ಕರ್‌, ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ, ಕ್ರಾಂತಿಕಾರಿ ಅಶ್ಫಕುಲ್ಲಾ ಖಾನ್‌ ಮುಂತಾದವರು ದೇಶಕ್ಕೆ ಸಲ್ಲಿಸಿದ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ಆದಿವಾಸಿಗಳು ಮತ್ತು ಮಹಿಳಾ ಕ್ರಾಂತಿಕಾರಿಗಳನ್ನೂ ಅವರು ನೆನಪಿಸಿ ಕೊಂಡರು. ವಿವಿಧ ಸಿದ್ಧಾಂತಗಳು ಮತ್ತು ವಿವಿಧ ವರ್ಗಗಳ 20ಕ್ಕೂ ಹೆಚ್ಚು ನಾಯಕರ ಹೆಸರನ್ನು ಅವರು ಉಲ್ಲೇಖಿಸಿದರು.

‘ಪೂಜ್ಯ ಬಾಪು (ಮಹಾತ್ಮ ಗಾಂಧಿ), ನೇತಾಜಿ ಸುಭಾಷ್‌ಚಂದ್ರ ಬೋಸ್‌, ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ವೀರ ಸಾವರ್ಕರ್‌ ಅವರು ಕರ್ತವ್ಯಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟರು’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT