ಬೀಜಿಂಗ್:ಕೋವಿಡ್–19 ಪಿಡುಗು ಹಾಗೂ ದೇಶದ ಗಡಿಯಲ್ಲಿ ಸಂಘರ್ಷ ಸ್ಥಿತಿ ನಿರ್ಮಾಣ ಇವು ಈ ವರ್ಷ ಭಾರತ ಎದುರಿಸಿದ ಎರಡು ಅಸಾಮಾನ್ಯ ಸವಾಲುಗಳು ಎಂದು ಚೀನಾದಲ್ಲಿನ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಹೇಳಿದರು.
ಅವರು ಬೀಜಿಂಗ್ನಲ್ಲಿರುವ ಇಂಡಿಯಾ ಹೌಸ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
‘ಕೋವಿಡ್ನಿಂದಾಗಿ ಚೀನಾದಲ್ಲಿರುವ ಭಾರತೀಯರು ಸಾಕಷ್ಟು ಸಮಸ್ಯೆ ಎದುರಿಸಬೇಕಾಯಿತು. ಭಾರತಕ್ಕೆ ತೆರಳಿದ್ದವರು ಕೂಡ ಚೀನಾಕ್ಕೆ ಬರಲು ಸಾಧ್ಯವಾಗಲಿಲ್ಲ. ವೀಸಾಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ವಿಮಾನಗಳ ಹಾರಾಟವನ್ನು ರದ್ದು ಮಾಡಿದ್ದೇ ಈ ಸಮಸ್ಯೆಗೆ ಕಾರಣ ಎಂದು ಹೇಳಿದರು.
ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಾಡಿದ್ದ ಬಾಷಣವನ್ನೂ ಮಿಸ್ರಿ ಓದಿದರು. ಗಡಿಯಲ್ಲಿನ ಸ್ಥಿತಿಯನ್ನು ಉಲ್ಲೇಖಿಸುವ ಮೂಲಕ ಲಡಾಖ್ನ ಪೂರ್ವ ಗಡಿಯಲ್ಲಿ ಚೀನಾ–ಭಾರತ ನಡುವಿನ ಸಂಘರ್ಷವನ್ನು ವಿವರಿಸಿದರು.
‘ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಎದುರಿಸಿದಂತಹ ಸ್ಥಿತಿಯನ್ನೇ ಭಾರತೀಯರು ಎದುರಿಸುತ್ತಿದ್ದೇವೆ. ಎಲ್ಲ ಭೇದಭಾವ ತೊರೆದು, ಒಗ್ಗಟ್ಟಿನಿಂದ ಈ ಸವಾಲನ್ನು ನಾವು ಎದುರಿಸಬೇಕು’ ಎಂದರು.
‘ಚೀನಾದಲ್ಲಿರುವ ಭಾರತೀಯರೂ ಹಲವು ಸಮಸ್ಯೆ ಎದುರಿಸುತ್ತಿದ್ದು, ರಾಯಭಾರಿ ಕಚೇರಿ ನಿಮ್ಮ ನೆರವಿಗೆ ಧಾವಿಸಲಿದೆ’ ಎಂದೂ ಹೇಳಿದರು.
ಚೀನಾದಲ್ಲಿನ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೀಜಿಂಗ್ನಲ್ಲಿ ಶನಿವಾರ ರಾಷ್ಡ್ರ ಧ್ವಜಾರೋಹಣ ನೆರವೇರಿಸಿದರು – ಪಿಟಿಐ ಚಿತ್ರ