ಬಾಲಸೋರ್ (ಒಡಿಶಾ): ಹೊಸ ತಲೆಮಾರಿನ ಆಕಾಶ್ (ಆಕಾಶ್-ಎನ್ಜಿ) ಕ್ಷಿಪಣಿಯನ್ನು ಶುಕ್ರವಾರ ಇಲ್ಲಿನ ಕರಾವಳಿಯ ಚಾಂಡಿಪುರದ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ (ಐಟಿಆರ್) ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ ಎಂದು ಡಿಆರ್ಡಿಒ ಮೂಲಗಳು ತಿಳಿಸಿವೆ.
‘ಕ್ಷಿಪಣಿಯು ರೇಡಿಯೊ ಫ್ರೀಕ್ವೆನ್ಸಿ ಅನ್ವೇಷಕ ವ್ಯವಸ್ಥೆ ಹೊಂದಿದ್ದು, ಅತಿ ವೇಗದ ಮಾನವರಹಿತ ವೈಮಾನಿಕ ಗುರಿಯನ್ನು ಯಶಸ್ವಿಯಾಗಿ ತಡೆದಿದೆ’ ಎಂದು ಡಿಆರ್ಡಿಒ ವಕ್ತಾರರು ತಿಳಿಸಿದ್ದಾರೆ.
ಪರೀಕ್ಷಾ ಸಮಯದಲ್ಲಿ, ಕ್ಷಿಪಣಿಯು ವೇಗದ ಮತ್ತು ಚುರುಕುಬುದ್ಧಿಯ ವೈಮಾನಿಕ ಬೆದರಿಕೆಗಳನ್ನು ತಟಸ್ಥಗೊಳಿಸಲು ಅಗತ್ಯವಾದ ಹೆಚ್ಚಿನ ಕುಶಲತೆ ಪ್ರದರ್ಶಿಸಿತು ಎಂದು ಮೂಲಗಳು ತಿಳಿಸಿವೆ.
ಆಕಾಶ್-ಎನ್ಜಿ ಕ್ಷಿಪಣಿಯು ಭಾರತೀಯ ವಾಯುಪಡೆಯ ವಾಯು ರಕ್ಷಣಾ ಸಾಮರ್ಥ್ಯ ದ್ವಿಗುಣವಾಗುವುದನ್ನು ಸಾಬೀತುಪಡಿಸಿದೆ.
ಚಾಂಡಿಪುರ ಸಮೀಪದ ಐಟಿಆರ್ ಪರೀಕ್ಷಾ ನೆಲೆಯಲ್ಲಿ ಎರಡು ದಿನಗಳ ಹಿಂದೆ ಭೂಮಿಯಿಂದ ಆಕಾಶಕ್ಕೆ ಹಾರುವ (ಸರ್ಫೇಸ್ ಟು ಏರ್) ಆಕಾಶ್ ಕ್ಷಿಪಣಿಯ ಯಶಸ್ವಿ ಉಡಾವಣೆ ನಡೆಸಲಾಗಿತ್ತು ಎಂದು ಮೂಲಗಳು ಹೇಳಿವೆ.
ಕ್ಷಿಪಣಿಯನ್ನು ಹೈದರಾಬಾದ್ನ ರಕ್ಷಣಾ ಸಂಶೋಧನೆ ಅಭಿವೃದ್ಧಿ ಪ್ರಯೋಗಾಲಯ (ಡಿಆರ್ಡಿಎಲ್) ಇತರ ಡಿಆರ್ಡಿಒ ಪ್ರಯೋಗಾಲಯಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.