ನವದೆಹಲಿ: ಭಾರತ ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಮತ್ತು ಈ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವುದನ್ನೂ ಭಾರತ ಸಹಿಸುವುದಿಲ್ಲ. ಮೃದುವಾಗಿದ್ದೇವೆ ಅಂದರೆ ಯಾರೂ ಕೂಡಾ ನಮ್ಮ ಸ್ವಾಭಿಮಾನದ ಮೇಲೆ ಆಕ್ರಮಣ ಮಾಡಬಹುದು ಎಂದಲ್ಲ. ನಾವು ಮೌನವಾಗಿ ಕುಳಿತಿದ್ದೇವೆ. ಭಾರತ ತನ್ನ ಗೌರವದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಪಾಕ್ ಅಸ್ತಿತ್ವಕ್ಕೆ ಬಂದಾಗಲಿಂದಲೂ ಗಡಿಯಲ್ಲಿ ದುಷ್ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ. ನಮ್ಮ ಯೋಧರು ದೇಶದೊಳಗೆ ಮಾತ್ರವಲ್ಲ ಅಗತ್ಯಬಿದ್ದಲ್ಲಿ ಗಡಿಯಾಚೆಗಿನ ಭಯೋತ್ಪಾದಕ ಅಡುಗು ತಾಣಗಳ ಮೇಲೆ ದಾಳಿ ಮಾಡಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಬಲ್ಲರು ಎಂಬುದನ್ನು ಸಾಬೀತು ಮಾಡಿದೆ. ಭಾರತಕ್ಕೆ ಅಂತಹ ಸಾಮರ್ಥ್ಯವಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಅಲ್ಲದೆ ನಮ್ಮ ಯೋಧರಿಗೆ ಗರಿಷ್ಠ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ ಎಂದು ಹೇಳಿದರು.
India will not tolerate anything that hurts its self-respect.
— ANI (@ANI) December 30, 2020
Being soft does not mean that anyone can attack our pride and we sit and watch silently. India will not compromise on its pride: Defence Minister Rajnath Singh pic.twitter.com/9twfaiXtAV
ಭಾರತವು ತನ್ನ ಭೂಮಿಯನ್ನು ಯಾರೊಬ್ಬರ ಕೈಗೆ ಹೋಗಲು ಬಿಡದಿರುವ ಬಲ ಹಾಗೂ ಸಾಮರ್ಥ್ಯವನ್ನು ಹೊಂದಿದೆ. ಅದು ವಿಶ್ವದ ಯಾವುದೇ ದೇಶವಾದರೂ ಸರಿ ಎಂದು ಇತ್ತೀಚೆಗೆ ಗಾಲ್ವಾನ್ ಗಡಿಯಲ್ಲಿ ಚೀನಾ ಭಾರತದ ಪ್ರದೇಶ ವಶಪಡಿಸಿಕೊಂಡಿದೆ ಎಂಬ ಆರೋಪಕ್ಕೆ ಉತ್ತರವಾಗಿ ಹೇಳಿದರು.
ಭಾರತ ಮತ್ತು ಚೀನಾ ನಡುವೆ ಮಾತುಕತೆ ನಡೆಯುತ್ತಿದೆ. ಆದರೆ ಇದುವರೆಗೆ ಯಾವುದೇ ಫಲ ದಕ್ಕಲಿಲ್ಲ. ಮುಂದಿನ ಸುತ್ತಿನ ಮಿಲಿಟರಿ ಹಂತದ ಮಾತುಕತೆ ನಡೆಯಲಿದೆ. ಆದರೆ ಯಥಾಸ್ಥಿತಿ ಕಾಯ್ದುಕೊಂಡರೂ ಯಾವುದೇ ರೀತಿಯ ಅರ್ಥಪೂರ್ಣ ಫಲಿತಾಂಶ ಬಂದಿಲ್ಲ ಎಂದು ಹೇಳಿದರು.
ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡರೆ ಸೈನ್ಯ ನಿಯೋಜನೆ ಕಡಿಮೆ ಆಗುವುದು ಸಹಜ. ನಮ್ಮ ನಿಯೋಜನೆಯಲ್ಲಿ ಯಾವುದೇ ಕಡಿತವುಂಟಾಗುವುದಿಲ್ಲ. ಅವರ ನಿಯೋಜನೆಯಲ್ಲೂ ಕಡಿಮೆಯಾಗುವುದಿಲ್ಲ ಎಂದು ಭಾವಿಸುತ್ತೇನೆ. ಮಾತುಕತೆಯು ಧನಾತ್ಮಕ ಫಲಿತಾಂಶವನ್ನುಬೀರುತ್ತದೆಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.