ನವದೆಹಲಿ: ಭಾರತೀಯ ರೈಲ್ವೆಯು ₹20 ಹೆಚ್ಚುವರಿ ಶುಲ್ಕ ವಿಧಿಸಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ವಕೀಲರೊಬ್ಬರು 22 ವರ್ಷಗಳ ಕಾನೂನು ಹೋರಾಟದ ಬಳಿಕ ಪ್ರಕರಣದಲ್ಲಿ ಜಯ ಸಾಧಿಸಿದ್ದಾರೆ.
1999ರಲ್ಲಿ ತಾರಾನಾಥ ಚತುರ್ವೇದಿ ಅವರು ಮಥುರಾದಿಂದ ಮೊರಾದಾಬಾದ್ಗೆ ಎರಡು ಟಿಕೆಟ್ ಪಡೆದಿದ್ದರು. ₹70 ಬದಲಾಗಿ ₹90 ಶುಲ್ಕ ಪಡೆಯಲಾಗಿತ್ತು. ರಸೀದಿ ನೀಡಿದರೂ ಅಧಿಕಾರಿಗಳು ಹೆಚ್ಚುವರಿ ಶುಲ್ಕ ವಾಪಸ್ ನೀಡಿರಲಿಲ್ಲ. ಹೀಗಾಗಿ ತಾರಾನಾಥ್ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಮಥುರಾ ಗ್ರಾಹಕ ನ್ಯಾಯಾಲಯವು ಎರಡು ದಶಕಕ್ಕೂ ಹೆಚ್ಚು ಕಾಲ 120 ಬಾರಿ ವಿಚಾರಣೆ ನಡೆಸಿದೆ. ಅಂತಿಮವಾಗಿ ಚತುರ್ವೇದಿ ಅವರಿಗೆ ₹20 ಹೆಚ್ಚುವರಿ ಶುಲ್ಕದ ಜೊತೆಗೆ 12 ವರ್ಷದ ಬಡ್ಡಿ ಸೇರಿ ₹15,000 ಪರಿಹಾರ ಹಣವಾಗಿ ನೀಡಲು ನ್ಯಾಯಾಲಯ ಆದೇಶ ನೀಡಿದೆ.
‘ಸ್ವತಃ ವಕೀಲನಾಗಿದ್ದೂ ಪ್ರಕರಣದಿಂದ ನೂರಾರು ಗಂಟೆಯ ಶ್ರಮ ಮತ್ತು ₹20,000ಕ್ಕೂ ಹೆಚ್ಚು ಹಣ ವ್ಯಯವಾಗಿದೆ. ಇದು ಹಣದ ಪ್ರಶ್ನೆ ಅಲ್ಲ. ಹಕ್ಕಿನ ಪ್ರಶ್ನೆ. ಒಬ್ಬ ನಾಗರಿಕನಾಗಿ ಭ್ರಷ್ಟ ವ್ಯವಸ್ಥೆಯನ್ನು ಪ್ರಶ್ನಿಸುವುದು ನನ್ನ ಹಕ್ಕು’ ಎಂದು ಚತುರ್ವೇದಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.